ಬೈಂದೂರು: ಮನೆಗೆ ಬೀಗ ಹಾಕಿ ಯಕ್ಷಗಾನಕ್ಕೆ ತೆರಳಿದ್ದ ವೇಳೆ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಂದೂರು ಉಪ್ಪುಂದ ನಿವಾಸಿಗಳಾದ ಯತಿರಾಜ್, ಮಹೇಶ್ ಯಳಜಿತ್ ಹಾಗೂ ನಾಗೂರು ನಿವಾಸಿ ಕಾರ್ತಿಕ್ ಬಂಧಿತ ಆರೋಪಿಗಳು. ಆರೋಪಿಗಳು ಕಳವು ಮಾಡಿರುವ ಚಿನ್ನಾಭರಣ, ಲ್ಯಾಪ್ಟಾಪ್ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿರುವ ಮೊಬೈಲ್ಗಳು ಸೇರಿ ಅಂದಾಜು ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರ್ಚ್ 10 ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನಲ್ಲಿರುವ ಜನಾರ್ದನ ಎಂಬವರು ರಾತ್ರಿ ಮನೆಗೆ ಬೀಗ ಹಾಕಿ ಮನೆ ಸಮೀಪದ ಯಕ್ಷಗಾನ ಕಾರ್ಯಕ್ರಮಕ್ಕೆ ಮನೆಯವರೊಂದಿಗೆ ಹೋದವರು ವಾಪಾಸು ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ಬಂದು ನೋಡುವಾಗ ಯಾರೋ ಮನೆಯ ಬಾಗಿಲು ಮುರಿದು ಮನೆಯೊಳಗೆ ಹೋಗಿ ಕೊಠಡಿಯ ಕಪಾಟಿನಲ್ಲಿರಿಸಿದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್ಟಾಪ್ ಕಳವು ಮಾಡಿಕೊಂಡು ಹೋಗಿರುವ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ತನಿಖೆ ನಡೆಸಿದ ಬೈಂದೂರು ವೃತ್ತ ನಿರೀಕ್ಷಕರಾದ ಸವಿತೃತೇಜ, ಬೈಂದೂರು ಠಾಣೆಯ ಪಿ.ಎಸ್.ಐ ರವರಾದ ತಿಮ್ಮೇಶ್ ಬಿ.ಎನ್ ಮತ್ತು ನವೀನ ಪಿ. ಬೋರಕರ ಮತ್ತು ಬೈಂದೂರು ಠಾಣೆಯ ಸಿಬ್ಬಂದಿಯವರಾದ ಚಿದಾನಂದ, ಮಾಳಪ್ಪ , ಪರಯ್ಯ ಮಠಪತಿ , ನವೀನ್ ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಯವರಾದ ರವೀಂದ್ರ, ಅಶೋಕ ರಾಥೋಡ್ , ಶಂಕರ ಮತ್ತು ಚಂದ್ರರವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
K