ಚಿಕ್ಕಮಗಳೂರು: ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯದ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಭಾಗಗಳಲ್ಲಿ ಹುಟ್ಟಿಕೊಂಡಿದ್ದ ನಕ್ಸಲ್ ಚಟುವಟಿಕೆಗಳು ಇದೀಗ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆ ಬಳಿಕ ಬಹುತೇಕ ನೇಪಥ್ಯಕ್ಕೆ ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ.ಇದಕ್ಕೆ ಪೂರಕ ಎಂಬಂತೆ ನಕ್ಸಲರ ಶರಣಾಗತಿಗೆ ರಾಜ್ಯ ಸರ್ಕಾರ ಆಫರ್ ನೀಡಿದ ಬೆನ್ನಲ್ಲೇ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಸರ್ಕಾರಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರು ನಕ್ಸಲರು ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗತಿಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ ನಕ್ಸಲ್ ತುಂಗಾ ದಳದ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ, ಆಂಧ್ರ ಪ್ರದೇಶದ ಕೆ.ವಸಂತ, ಮಾರೆಪ್ಪ ಅರೋಲಿ ಶರಣಾಗತಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದ್ದು,ಈಗಾಗಲೇ ಶರಣಾಗತಿಗೆ ವೇದಿಕೆ ಸಿದ್ಧವಾಗಿದ್ದು ಶೀಘ್ರವೇ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಕ್ಸಲರು ಶರಣಾಗತಿಗೆ ಶಾಂತಿಗಾಗಿ ನಾಗರಿಕ ವೇದಿಕೆಗೆ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಜತೆ ನಾಗರಿಕ ವೇದಿಕೆಯ ಸದಸ್ಯರು ಚರ್ಚಿಸಿದ್ದು, ಕಳೆದ 3 ತಿಂಗಳಿನಿಂದ ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ಪೊಲೀಸರು ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಎನ್ ಕೌಂಟರ್ ಮಾಡಿದ್ದರು.
ನಕ್ಸಲರ ಪ್ರಮುಖ 7 ಬೇಡಿಕೆಗಳೇನು?
ನಕ್ಸಲರು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಯು ಘನತೆಯುತವಾಗಿ ನಡೆಯಬೇಕು ಹಾಗೂ ಅವರ ಆತ್ಮಗೌರವಕ್ಕೆ ಯಾವುದೇ ಧಕ್ಕೆಯಾಗಬಾರದು. ಹೋರಾಟದ ಮಾರ್ಗವನ್ನು ಬದಲಾಯಿಸಿ, ಪ್ರಜಾತಾಂತ್ರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆಯಾಗದಂತೆ ಬಯಸಿದ್ದಾರೆಂದು ತಿಳಿಸಿದ್ದಾರೆ
ನಕ್ಸಲೀಯರು ಹೊರಬಂದ ನಂತರ ಜೈಲುಗಳಲ್ಲಿ ಕೊಳೆಯುವ ಸ್ಥಿತಿ ಎದುರಾಗಬಾರದು, ಯಾವುದೇ ಸಂಬಂಧವಿಲ್ಲದ ಕೆಲವು ಪ್ರಕರಣಗಳಲ್ಲಿ ಅವರ ಹೆಸರುಗಳನ್ನು ಸೇರಿಸಿದ್ದು, ಈ ಪ್ರಕರಣಗಳ ಜಾಲದಿಂದ ಮುಕ್ತಿಸಿಗಬೇಕು ಹಾಗೂ ಮುಖ್ಯವಾಹಿನಿಗೆ ಬಂದ ನಂತರ ಬೇಗನೆ ಜಾಮೀನಿನ ಮೇಲೆ ಹೊರಬರಲು ಸಹಕರಿಸುವಂತೆ ಬೇಡಿಕೆ ಇಡಲಾಗಿದೆ.
ಎಲ್ಲಾ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದಡಿಯಲ್ಲಿ ತಂದು ತ್ವರಿತ ವಿಚಾರಣೆ ಮಾಡುವಂತೆ ಕೋರಿದ್ದಾರೆ.
ಅವರಿಗೆ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಹಾಗೂ ಹೊರಬಂದ ನಂತರ ಅವರ ಜೀವನಕ್ಕೆ ದಾರಿ ಏನು ಎಂಬ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ಈಗಾಗಲೇ ಮುಖ್ಯವಾಹಿನಿಗೆ ಬಂದಂತಹ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸ್ಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಹಾಗೂ ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೆ ಕೂಡ ಈ ಪ್ಯಾಕೇಜ್ ಅನ್ವಯವಾಗುವಂತೆ ಮಾಡಿ. ಅವರ ಬಿಡುಗಡೆಗೆ ಸಹಕರಿಸುವಂತೆ ಬೇಡಿಕೆ ಇಡಲಾಗಿದೆ.
ಈ ಎಲ್ಲ ವಿಚಾರಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು 3 ರಾಜ್ಯಗಳ ನಿಲುವು ಒಂದೇ ರೀತಿಯಾಗಿ ಇರುತ್ತದೆಯೇ ಎಂದು ಸ್ಪಷ್ಟತೆ ಕೋರಿದ್ದಾರೆ.
ವಿಕ್ರಮ್ ಗೌಡ ಎನ್ ಕೌಂಟರ್ ಹತ್ಯೆ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಲಾಗಿದೆ.
ರಕ್ತ ಕ್ರಾಂತಿಯಿಂದ ಏನೂ ಸಾಧಿಸಲಾಗದೇ ಸಮಾಜದ ವಾಹಿನಿಯಲ್ಲಿದ್ದುಕೊಂಡೇ ಹೋರಾಟ ಮಾಡುವುದಕ್ಕೆ ಅವಕಾಶ ಸಿಗಲಿದ್ದು ನಕ್ಸಲರು ಶಸ್ತ್ರಾಸ್ತ್ರ ತೊರೆದು ಮತ್ತೆ ಸಮಾಜದ ಮುಖ್ಯವಾಹಿನಿಗೆ ಬರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ.