ಬೆಂಗಳೂರು: ಮಕ್ಕಳ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಮಕ್ಕಳ ಹೆಸರು ಬದಲಾವಣೆಗೆ ಹೊಸ ಮಾರ್ಗಸೂಚಿಯನ್ನು ರೂಪಿಸಿದೆ. 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚಿಸಿದೆ. ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ಶುಕ್ರವಾರ ಆದೇಶ ಹೊರಡಿಸಿದೆ.
ಅದ್ರಿತ್ ಭಟ್ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಿಸಲು ಕೋರಲಾಗಿತ್ತು. ಆದರೆ ಉಡುಪಿ ಜನನ ನೋಂದಣಾಧಿಕಾರಿಗಳು ನಿರಾಕರಿಸಿದ ಹಿನ್ನೆಲೆ ರಿಟ್ ಸಲ್ಲಿಕೆ ಮಾಡಲಾಗಿತ್ತು. ಇಂದು ವಿಚಾರಣೆ ಮಾಡಿದ ಹೈಕೋರ್ಟ್, ಮಗುವಿನ ಹೆಸರು ಬದಲಾವಣೆಗೆ ತಂದೆ ತಾಯಿ ಪ್ರಮಾಣಪತ್ರ ಸಲ್ಲಿಸಬೇಕು. ತಂದೆ ತಾಯಿಯ ಗುರುತು ಧೃಡಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಆದರೆ ಹೊಸ ಹೆಸರಿನೊಂದಿಗೆ, ಹಳೆಯ ಹೆಸರೂ ದಾಖಲೆಯಲ್ಲಿರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ. ವಯಸ್ಕರ ಹೆಸರು ಬದಲಾವಣೆಗೂ ಇದೇ ಪದ್ಧತಿ ಅನುಸರಿಸಬಹುದು. ಸರ್ಕಾರ ಸೂಕ್ತ ನಿಯಮ ರೂಪಿಸುವವರೆಗೂ ಈ ನಿರ್ದೇಶನ ಪಾಲಿಸಬೇಕು ಎಂದು ಜನನ ನೋಂದಣಾಧಿಕಾರಿಗಳಿಗೆ ನ್ಯಾ.ಎನ್.ಎಸ್.ಸಂಜಯ್ ಗೌಡ ಸೂಚನೆ ನೀಡಿದ್ದಾರೆ.