
ಕಾರ್ಕಳ, ಮೇ.5: ಪತ್ನಿಯ ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವುದಾಗಿ ನಂಬಿಸಿ ಪತಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿ ಬೆಳಕಿಗೆ ಬಂದಿದೆ.
ಬೆಳ್ಮಣ್ ನ ರೊನಾಲ್ಡ್ ರೊಡ್ರಿಗಸ್ ಅವರು ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಪತ್ನಿ ರೋಸಿ ಅವರ ಜೊತೆ ವಾಸ್ತವ್ಯವಿದ್ದಾರೆ. ರೋಸಿ ಅವರು ದೀರ್ಘಕಾಲದ ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಪತಿ ರೊನಾಲ್ಡ್ ರೋಡ್ರಿಗಸ್ ಅವರು 2026 ರ ಮಾ. 23 ರಂದು ಫಿಸಿಯೋಥೆರಪಿ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಉಡುಪಿಯ ಕಡಿಯಾಳಿ ದೇವಸ್ಥಾನದ ಬಳಿ ಸಿದ್ಧಾರ್ಥ್ ಎಂಬ ವ್ಯಕ್ತಿ ಪರಿಚಯವಾಗಿ ತನ್ನ ತಾಯಿಯು ಕೂಡ ಇಂತಹುದೇ ಖಾಯಿಲೆಯಿಂದ ಬಳಲುತ್ತಿದ್ದು ಅವರು ಆಯುರ್ವೇದಿಕ್ ಚಿಕಿತ್ಸೆ ಪಡೆದು ಗುಣಮುಖವಾಗಿದ್ದು, ನಿಮ್ಮ ಪತ್ನಿಗೂ ಅದೇ ರೀತಿ ಚಿಕಿತ್ಸೆ ನೀಡಿ ಗುಣಪಡಿಸುತ್ತೇವೆ ಎಂದು ನಂಬಿಸಿದ್ದ. ಬಳಿಕ ಮಾಧವ ಎಂಬ ಹೆಸರಿನ ವ್ಯಕ್ತಿಯ ಪೋನ್ ನಂಬರ್ ನೀಡಿ ಪರಿಚಯಿಸಿದ್ದು ಮಾಧವನು ಆಯುರ್ವೇದಿಕ್ ಚಿಕಿತ್ಸೆ ಪಡೆಯಲು ಸುಮಾರು ಹಣ ಖರ್ಚಾಗುತ್ತದೆ ಎಂದು ನಂಬಿಸಿದ್ದು, ಗೂಗಲ್ ಪೇ ಮೂಲಕ ಮಾಧವ ತಿಳಿಸಿದ ಅನಿಲ್ ಪವಾರ್ ಎಂಬ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಿಸಿದ್ದಾರೆ.
ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ರೊನಾಲ್ಡ್ ಅವರು ಅದೇ ದಿನ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ ಎ.ಟಿ.ಎಂ. ಮುಖೇನ 40,000/- ರೂಪಾಯಿಗಳನ್ನು ಹಣ ತೆಗೆದು ಆಪಾದಿತ ಸಿದ್ದಾರ್ಥ್ ಗೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಆರೋಪಿಯ ಮತ್ತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಾತನಾಡಲು ಉಡುಪಿಯ ಮಾಂಡವಿ ಬಿಲ್ಡಿಂಗ್ನಲ್ಲಿರುವ ಆರ್ಯುವೇದಿಕ್ ಔಷಧಿ ಅಂಗಡಿಗೆ ಬರುವಂತೆ ತಿಳಿಸಿದ್ದು, ಆಯುರ್ವೇದಿಕ್ ಔಷಧಿ ಅಂಗಡಿಗೆ ತೆರಳಿದಾಗ ಅಲ್ಲಿ ಅನಿಲ್ ಎಂಬ ವ್ಯಕ್ತಿಯನ್ನು ಪರಿಚಯಿಸಿದ್ದು, ಅನಿಲ್ ಮತ್ತು ಮಾಧವ ಅಂಗಡಿಯಿಂದ ಕೆಲವು ಔಷಧಿಗಳನ್ನು ತೆಗೆದುಕೊಂಡು ಕೊಟ್ಟರೆ ಖಾಯಿಲೆಯು ಸರಿ ಆಗುತ್ತದೆ ಎಂದು ನಂಬಿಸಿ, ಔಷಧಿಗಾಗಿ 10,80,000/- ರೂ. ನೀಡುವಂತೆ ಕೇಳಿದ್ದಾರೆ.ಆಗ ರೊನಾಲ್ಡ್ ಅವರು ಹೆಚ್.ಡಿ.ಎಫ್.ಸಿ.. ಬ್ಯಾಂಕ್ ನಿಂದ ಚೆಕ್ ಮೂಲಕ ಹಂತ ಹಂತವಾಗಿ ಒಟ್ಟು ರೂ.1,80,000 ಅನ್ನು ಅನಿಲ್ ಎಂಬಾತನಿಗೆ ನೀಡಿದ್ದಾರೆ. ಬಳಿಕ ಆಪಾದಿತರು ನೀಡಿದ ಔಷಧಿಗಳನ್ನು ಪಡೆದು ಮನೆಗೆ ಬಂದಿದ್ದು, ಔಷಧಿಗಳನ್ನು ತಮ್ಮ ಪತ್ನಿಗೆ ನೀಡಿದರೂ ಇದುವರೆಗೆ ಗುಣಮುಖರಾಗದ ಹಿನ್ನೆಲೆ ಹಣ ಪಡೆದವರು ನೀಡಿದ್ದ ನಂಬರ್ ಗಳಿಗೆ ಕರೆ ಮಾಡಿದಾಗ ಮೊಬೈಲ್ ನಂಬ್ರಗಳು ಸ್ವಿಚ್ ಆಫ್ ಆಗಿವೆ. ಆರೋಪಿಗಳು ತನ್ನ ಪತ್ನಿಯ ಖಾಯಿಲೆಯನ್ನು ಗುಣಪಡಿಸುವುದಾಗಿ ನಂಬಿಸಿ ಒಟ್ಟು 12,09,160/- ರೂಪಾಯಿಗಳನ್ನು ಪಡೆದು ವಂಚನೆ ಎಸಗಿದ್ದಾರೆ ಎಂದು ರೊನಾಲ್ಡ್ ರೋಡ್ರಿಗಸ್ ಅವರು ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
