Share this news

ಕಾರ್ಕಳ: ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಆಸಕ್ತ ರೈತರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2025-26ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ರೈತರಿಗೆ ಕಂದು ಬಾಳೆ, ಅಂಗಾAಶ ಬಾಳೆ, ಗೇರು, ಕೊಕ್ಕೋ, ಕಾಳುಮೆಣಸು, ಜಾಯಿಕಾಯಿ, ಅನಾನಸ್ಸು, ಹಾಗೂ ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಹಲಸು ಮತ್ತು ಡ್ರ‍್ಯಾಗನ್ ಫ್ರೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ ಲಭ್ಯವಿದೆ. ಸಣ್ಣ ಸಸ್ಯಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ. 50 ರ ದರದಲ್ಲಿ ಗರಿಷ್ಠ ರೂ. 10.00 ಲಕ್ಷಗಳ ಸಹಾಯಧನ, ಸಸ್ಯಾಗಾರಗಳ ಉನ್ನತೀಕರಣಕ್ಕಾಗಿ ಶೇ. 50ರ ಸಹಾಯಧನದಲ್ಲಿ ಪ್ರತಿ ಹೆಕ್ಟೇರ್ಗೆ ರೂ. 2.00 ಗಳಂತೆ 2.00 ಹೆಕ್ಟೇರ್ಗಳಿಗೆ ರೂ. 4.00 ಲಕ್ಷಗಳ ಸಹಾಯಧನ, ಅಂಗಾAಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ ಗರಿಷ್ಠ ರೂ. 100.00 ಲಕ್ಷಗಳ ಸಹಾಯಧನ, ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇ. 30ರ ದರದಲ್ಲಿ ಪ್ರತಿ ಎಕರೆಗೆ ಗರಿಷ್ಠ ರೂ. 600.00 ಸಹಾಯಧನವಿದೆ. ವಿವಿಧ ಜಾತಿಯ ಅಣಬೆ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕ ಹಾಗೂ ಕಾಂಪೋಸ್ಟ್ ತಯಾರಿಕ ಘಟಕಗಳ ಸ್ಥಾಪನೆಗಾಗಿ ಶೇ. 40ರ ದರದಲ್ಲಿ ಗರಿಷ್ಠ ರೂ. 8.00 ರಿಂದ 12.00 ಲಕ್ಷಗಳ ಸಹಾಯಧನ ಲಭ್ಯವಿದೆ. ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಸಂಸ್ಥೆಗಳು ಸ್ಥಾಪಿಸುವ ಗ್ರಾಮೀಣ ಮಾರುಕಟ್ಟೆ/ರೈತ ಸಂತೆ/ನೇರ ಮಾರುಕಟ್ಟೆ ಸ್ಥಾಪಿಸಲು ಶೇ. 40 ರ ಗರಿಷ್ಠ ರೂ. 10.00 ಲಕ್ಷಗಳ ಸಾಲ ಆಧಾರಿತ ಸಹಾಯಧನ ನೀಡಲು ಅವಕಾಶವಿರುತ್ತದೆ.

ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಾಗೂ ಕ್ಷೇತ್ರ ಹಂತದಲ್ಲಿ ಬಹುಪಯೋಗಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 35 ರ ದರದಲ್ಲಿ ಗರಿಷ್ಠ 12.25 ಲಕ್ಷಗಳ ವರೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಬೆಳೆಗಳನ್ನು ಕ್ಷೇತ್ರದ ಹಂತದಲ್ಲಿ ನಿರ್ವಹಿಸಲು ಹಾಗೂ ಶೇಖರಿಸಲು ಪ್ಯಾಕ್ ಹೌಸ್ಗಳ ನಿರ್ಮಾಣಕ್ಕೆ ಶೇ. 50ರ ದರದಲ್ಲಿ ಗರಿಷ್ಠ 2.40 ಲಕ್ಷಗಳ ಸಹಾಯಧನ ಲಭ್ಯವಿದೆ. ರೈತರ ಯಾಂತ್ರೀಕರಣ ಅವಶ್ಯಕತೆಗೆ 20 ಎಚ್‌ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ‍್ಯಾಕ್ಟರ್ಗಳಿಗೆ, 8 ಎಚ್‌ಪಿ ವರೆಗಿನ ಹಾಗೂ ಮೇಲ್ಪಟ್ಟ ಪವರ್ ಟಿಲ್ಲರ್ ಹಾಗೂ ಸ್ಪ್ರೇಯರ್ಗಳ ಖರೀದಿಗೆ ಪ.ಜಾತಿ ಹಾಗೂ ಪ.ಪಂಗಡ ರೈತರುಗಳಿಗೆ ಶೇ.50 ರ ದರದಲ್ಲಿ ರೂ. 2.50 ಲಕ್ಷದವರೆಗೆ ಹಾಗೂ ಇತರೇ ರೈತರುಗಳಿಗೆ ಶೇ. 40ರ ದರದಲ್ಲಿ 2.00 ಲಕ್ಷದವರೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಗೆ ಬೆಳೆಗಳಿಗೆ ಬಳಸುವ ಪ್ಲಾಸ್ಟಿಕ್ ಹೊದಿಕೆ/ಮಲ್ಚಿಂಗ್ಗಳಿಗೆ ಶೇ. 50ರ ದರದಲ್ಲಿ ಪ್ರತಿ ಹೆಕ್ಟೇರ್ಗೆ ರೂ. 20000/- ಸಹಾಯಧನ, ತೋಟಗಳಲ್ಲಿ ಕಳೆ ನಿಯಂತ್ರಣಕ್ಕಾಗಿ ವಿಡ್ ಮ್ಯಾಟ್ ಬಳಕೆಗೆ ಶೇ.50ರ ಸಹಾಯಧನದಲ್ಲಿ ರೂ. 25000/- ಪ್ರತಿ ಹೆಕ್ಟೇರ್ಗೆ ಸಹಾಯಧನ ಲಭ್ಯವಿದೆ. ಹಸಿರು ಮನೆ/ನೆರಳು ಪರದೆಗಳ ನಿರ್ಮಾಣಕ್ಕಾಗಿ ಪ್ರತಿ ಫಲಾನುಭವಿಗೆ ಗರಿಷ್ಠ 2500 ಚದರ ಮೀಟರ್ ವರೆಗೆ ಶೇ. 50ರ ಸಹಾಯಧನ ಲಭ್ಯವಿದೆ. ಮಳೆ ನೀರು ಸಂಗ್ರಹಿಸಿ ತೋಟದ ಬೆಳೆಗಳಿಗೆ ಬಳಸಲು ಅನುಕೂಲವಾಗುವಂತೆ ಗರಿಷ್ಠ 1200 ಘನ ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕಾಗಿ ಶೇ. 50ರ ಸಹಾಯಧನದಲ್ಲಿ ರೂ. 75000/- ಸಹಾಯಧನ ನೀಡಿಕೆಗೆ ಅವಕಾಶವಿರುತ್ತದೆ.

ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ರೈತರಿಗೆ ಅವಶ್ಯವಿರುವ ಬ್ರಶ್ ಕಟ್ಟರ್, ಚೈನ್ ಸಾ, ಏಣಿ, ಕೈಗಾಡಿ, ಮದ್ದು ಸಿಂಪರಣಾ ಯಂತ್ರಗಳು, ಮೊಟಾರು ಚಾಲಿತ ಕೈಗಾಡಿ, ಕಾಳುಮೆಣಸು ಸುಲಿಯುವ ಯಂತ್ರ, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ಚಾಫ್ ಕಟ್ಟರ್ ಒಳಗೊಂಡAತೆ ಇಲಾಖಾ ಅನುಮೋದಿತ ಕಂಪನಿಗಳಿAದ ಖರೀದಿಸಿದ ಗರಿಷ್ಠ 5 ಯಂತ್ರೋಪಕರಣಗಳಿಗೆ ಶೇ. 40/50ರ ದರದಲ್ಲಿ ಗರಿಷ್ಠ 1.25 ಲಕ್ಷ ಸಹಾಯಧನ ಲಭ್ಯವಿದೆ.
ಇತ್ತೀಚಿನ ದಿನಗಳಲ್ಲಿ ತಲೆದೋರುತ್ತಿರುವ ನೀರಿನ ಕೊರತೆಗೆ ಪರಿಹಾರವಾಗಿ ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಸಹಾಯಧನ ಲಭ್ಯವಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ 1200 ಘನ ಮೀ ಅಳತೆಯ ನೀರು ಸಂಗ್ರಹಣಾ ಘಟಕಕ್ಕೆ ರೂ. 75000/-, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2500 ಘನ ಮೀ ಅಳತೆಗೆ ರೂ. 1.50 ಲಕ್ಷ, 4500 ಘನ ಮೀ ಅಳತೆಗೆ ರೂ. 2.80 ಲಕ್ಷ, 6500 ಘ.ಮೀ ಅಳತೆಗೆ ರೂ. 4.00 ಲಕ್ಷ ಹಾಗೂ 9000 ಘ.ಮೀ ಅಳತೆಯ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ರೂ. 5.00 ಲಕ್ಷ ಸಹಾಯಧನ ಲಭ್ಯವಿದೆ.

ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಪ.ಜಾತಿ ಮತ್ತು ಪ.ಪಂಗಡ ರೈತರಿಗೆ ಶೇ. 90 ರಷ್ಟು ಹಾಗೂ ಇತರೇ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ಲಭ್ಯವಿದೆ. ಸಹಾಯಧನಕ್ಕೆ ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಕಂಪನಿಗಳ ಮೂಲಕ ರೈತರು ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ. ಹನಿ ನೀರಾವರಿ ಮೂಲಕ ಪೋಷಕಾಂಶಗಳನ್ನು ನೀಡಲು ಅನುಕೂಲವಾಗುವಂತೆ ನೀರಿನಲ್ಲಿ ಕರಗುವ ಪೋಷಕಾಂಶಗಳ ಖರೀದಿಗೆ ಸಹಾಯಧನ ಲಭ್ಯವಿದೆ.
ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಅಭಿವೃದ್ಧಿ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಉಚಿತ ಗಿಡಗಳ ವಿತರಣೆಯೊಂದಿಗೆ 4 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಪಾವತಿ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಕೊಳವೆ ಬಾವಿ, ತೆರೆದ ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ , ಎರೆಹುಳು ಘಟಕ ಸ್ಥಾಪನೆಗೆ ಸಹಾಯಧನ ಪಡೆಯಬಹುದಾಗಿದೆ. ತಾಳೆ ಉತ್ಪನ್ನಗಳನ್ನು ಸರ್ಕಾರಿ ಅನುಮೋದಿತ ಕಂಪನಿಗಳೊAದಿಗೆ ರೈತರಿಗೆ ಬೈಬ್ಯಾಕ್ ಒಡಂಬಡಿಕೆಯ ಅನುಕೂಲ ಕಲ್ಪಿಸಲಾಗುವುದು.

ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ಪ್ರಾಯೋಗಿಕ ತರಬೇತಿ ನೀಡುವುದರೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 10 ಪೆಟ್ಟಿಗೆ ಖರೀದಿಗೆ ಶೇ. 75 ರಿಂದ 90 ರ ಸಹಾಯಧನ ಲಭ್ಯವಿದೆ. ಕೃಷಿ ಭೂಮಿ ಹೊಂದಿರದ ಆಸಕ್ತರಿಗೆ ಗರಿಷ್ಠ 4 ಪೆಟ್ಟಿಗೆಗಳ ಖರೀದಿಗೆ ಸಹಾಯಧನ ಲಭ್ಯವಿರುತ್ತದೆ.
ಅಸಂಪ್ರದಾಯಿಕ ಇಂಧನ ಮೂಲಗಳಲ್ಲಿ ಒಂದಾದ ಸೌರಶಕ್ತಿ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಸೌರಶಕ್ತಿ ಚಾಲಿತ ಪಂಪ್ ಸೆಟ್ಗಳ ಖರೀದಿಗೆ ಇಲಾಖೆಯಿಂದ ಶೇ. 50ರ ಸಹಾಯಧನ ಲಭ್ಯವಿದೆ. 3 ಊP ಪಂಪ್ಸೆಟ್ ಒಟ್ಟು ವೆಚ್ಚ 2.00 ಲಕ್ಷಗಳಿದ್ದು ರೂ. 1.00 ಲಕ್ಷ ಸಹಾಯಧನ ಹಾಗೂ 5 ಊP ಮೇಲ್ಪಟ್ಟ ಪಂಪ್ಸೆಟ್ಗಳಿಗೆ ಒಟ್ಟು ವೆಚ್ಚ 3.00 ಲಕ್ಷಗಳಿಗೆ ರೂ. 1.50 ಲಕ್ಷ ಸಹಾಯಧನ ಲಭ್ಯವಿದೆ. ಈ ವೆಚ್ಚದಲ್ಲಿ ಸೋಲಾರ್ ಪ್ಯಾನಲ್, ಕೇಬಲ್, ನಿಯಂತ್ರಣ ಘಟಕಗಳು ಹಾಗೂ ಪಂಪ್ಗಳನ್ನು ಒಳಗೊಂಡಿರುತ್ತದೆ. ಸೌರಶಕ್ತಿ ಬಳಸಿ ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸುವ ಸಲುವಾಗಿ ಬಳಸುವ ಸೋಲಾರ್ ಶೆಡ್ಗಳ ನಿರ್ಮಾಣಕ್ಕೆ ಇಲಾಖಾ ಸಹಾಯಧನ ಲಭ್ಯವಿದೆ.
ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ,ತೆಂಗು, ಕಾಳುಮೆಣಸು, ಗೇರು, ಜಾಯಿಕಾಯಿ, ರಾಮ್ಬೂಟನ್, ಮಲ್ಲಿಗೆ, ಕೊಕ್ಕೋ, ಶ್ರೀಗಂಧ ಒಳಗೊಂಡAತೆ ವಿವಿಧ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿರುತ್ತದೆ. ಈ ಯೋಜನೆಯ ಪ್ರಯೊಜನ ಪಡೆಯಲಿಚ್ಛಿಸುವವರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಎಲ್ಲಾ ಯೋಜನೆಗಳಿಗೆ ಪ್ರಯೋಜನ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಮತ್ತು ಯೋಜನೆಗೆ ಅನುಗುಣವಾಗಿ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವುದು. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *