ಕಾರ್ಕಳ: ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿಯೂ ಆಗಿದ್ದ ತಣ್ಣಗಿನ ಮಲೆನಾಡು ಭಾಗದಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ನೀಡುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ಟ್ವೀಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ ಸಿಗುತ್ತದೆ. ಇದರಿಂದ ಪೊಲೀಸರ ಆತ್ಮ ಸ್ಥೈರ್ಯ ಏನಾಗಬೇಡ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ. ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸುನಿಲ್ ಆಗ್ರಹಿಸಿದ್ದಾರೆ.