Share this news

ಉಡುಪಿ: ಕರಾವಳಿಯ ಜನಪದ ಕ್ರೀಡೆಗಳ ಪೈಕಿ ಹೆಚ್ಚು ಜನಪ್ರಿಯ ಕಂಬಳ. ಸದ್ಯ ಕಂಬಳ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಕರಾವಳಿಯ ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೀಡಲು ಆದೇಶ ಹೊರಡಿಸಿದೆ. ಜನಪದ ಕ್ರೀಡೆ ಉಳಿವಿಗಾಗಿ ಸರ್ಕಾರದ ಬೆಂಬಲಕ್ಕಾಗಿ ಕಂಬಳ ಪ್ರೇಮಿಗಳು ಬೇಡಿಕೆ ಇಟ್ಟಿದ್ದರೂ ಕೂಡ ಸರ್ಕಾರ ಕಳೆದ ವರ್ಷ ಕಂಬಳಕ್ಕೆ ಅನುದಾನ ನೀಡಿರಲಿಲ್ಲ. ಈ ಬಗ್ಗೆ ಕಂಬಳ ಪ್ರಿಯರು ಬೇಸರ ವ್ಯಕ್ತಪಡಿಸಿದ್ದರು.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಕರಾವಳಿಯ ಶಾಸಕರು ಬೇಡಿಕೆ ಸಲ್ಲಿಸಿದ್ದರು. ಸ್ವತಃ ಸ್ಪೀಕರ್ ಯುಟಿ ಖಾದರ್ ಕಂಬಳ ಪರ ಬ್ಯಾಟಿಂಗ್ ಮಾಡಿದ್ದರು. ಸರ್ಕಾರ ನೆರವು ಕೊಡದಿದ್ದರೆ ನಾವೇ ಹಣ ಸಂಗ್ರಹಿಸಿ ಕಂಬಳ ಮಾಡಲು ಗೊತ್ತು ಎಂದು ಚಾಟಿ ಬೀಸಿದ್ದರು. ಯುಟಿ ಖಾದರ್ ಚಾಟಿ ಬೀಸಿದ ಬೆನ್ನಲ್ಲೇ ಕಂಬಳಕ್ಕೆ ಅನುದಾನ ಬಿಡುಗಡೆಗೆ ಸರ್ಕಾರ ಆದೇಶ ಮಾಡಿದೆ. ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಪ್ರವಾಸೋದ್ಯಮ ಸಚಿವ ಹೆಚ್‌ಕೆ ಪಾಟೀಲ್ ಆದೇಶ ಹೊರಡಿಸಿದ್ದಾರೆ. 2024- 25 ನೇ ಸಾಲಿನ 24 ಜೋಡುಕರೆ ಕಂಬಳಗಳಿಗೆ ತಲಾ 5 ಲಕ್ಷ ರೂ. ಘೋಷಣೆಯಾಗಿದೆ.

ಕರವಾಳಿಯಲ್ಲಿ ಒಟ್ಟು 25 ಕಂಬಳಗಳು ನಡೆಯುತ್ತವೆ. 2020 – 21ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ 10 ಕಂಬಳಗಳಿಗೆ ತಲಾ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ನಡೆಯುವ 53 ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ಕೋರಲಾಗಿತ್ತು. ಕಳೆದ ವರ್ಷ 50 ಲಕ್ಷ ರೂ. ಘೋಷಿಸಿದ್ದ ಸರ್ಕಾರ ನಂತರ ಅನುದಾನ ನೀಡಿರಲಿಲ್ಲ. ಹಾಗಾಗಿ ಘೋಷಣೆಯಾದ 50 ಲಕ್ಷ ರೂ. ಹಣ ತುರ್ತಾಗಿ ಬಿಡುಗಡೆ ಮಾಡುವಂತೆ ಕಂಬಳ ಸಮಿತಿ ಒತ್ತಾಯಿಸಿದೆ.

 

Leave a Reply

Your email address will not be published. Required fields are marked *