ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿಟಿ ರವಿ ಹೇಳಿದ್ದಕ್ಕೆ ಕೊಲೆಗಾರ ಪದ ಬಳಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥನೆ ಮಾಡಿಕೊಂಡಿದ್ದರು. ಈ ಘಟನೆ ನಡೆದ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರೊಬ್ಬರು ಹೈಕಮಾಂಡ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಹಿರಿಯ ಪರಿಷತ್ ಸದಸ್ಯ ಕೆಸಿ ವೇಣುಗೋಪಾಲ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ರಾಹುಲ್ ಗಾಂಧಿಗೆ ಕೆಸಿ ವೇಣುಗೋಪಾಲ್ ವಿಚಾರ ತಿಳಿಸಿದ್ದರು. ಇದೇ ವೇಳೆ, ಘಟನೆಯಲ್ಲಿ ತಮ್ಮ ಹೆಸರು ಪ್ರಸ್ತಾಪ ಮಾಡ್ತಿರುವುದಕ್ಕೆ ರಾಹುಲ್ ಗಾಂಧಿ ಗರಂ ಆಗಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿ ಸಿಟ್ಟಾಗುತ್ತಿದ್ದಂತೆಯೇ ಪರಿಷತ್ ಸದಸ್ಯನಿಗೆ ವೇಣುಗೋಪಾಲ್ ವಾಪಸ್ ಕರೆ ಮಾಡಿದ್ದಾರೆ. ಸಭಾಪತಿ ಕೊಠಡಿಯಲ್ಲಿ ಇದ್ದಾಗಲೇ ಪರಿಷತ್ ಸದಸ್ಯನಿಗೆ ದೆಹಲಿಯಿಂದ ಕರೆ ಬಂದಿದೆ. ಈ ವೇಳೆ ಕರೆ ಸ್ವೀಕರಿಸಿದ ಪರಿಷತ್ ಸದಸ್ಯ, ಪ್ರಭಾವಿ ಸಚಿವರಿಗೆ ಪೋನ್ ಕೊಟ್ಟಿದ್ದಾರೆ. ಇದೇ ವೇಳೆ, ರಾಹುಲ್ ಗಾಂಧಿ ಹೆಸರು ಈ ವಿಚಾರದಲ್ಲಿ ತಳಕು ಹಾಕಬೇಡಿ ಎಂದು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ.
ಕೆಸಿ ವೇಣುಗೋಪಾಲ್ ಸೂಚನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆಪ್ತರು ರಾಹುಲ್ ಗಾಂಧಿ ಬಗ್ಗೆ ಯಾವುದೇ ವಿಷಯ ಪ್ರಸ್ತಾಪ ಮಾಡಿಲ್ಲ. ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಹೇಳಿಕೆಗೆ ಅಗ್ರೆಸಿವ್ ತಿರುಗೇಟು ನೀಡಿಲ್ಲ ಎಂದು ಮೂಲಗಳು ಹೇಳಿವೆ.
