ಉಡುಪಿ: ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಕರೆ ಮಾಡಿ ಬೆದರಿಸಿ, ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಸೆನ್ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಯಾದಗಿರಿ ಜಿಲ್ಲೆಯ ಕಿರಣ್ (24) ಎಂದು ಗುರುತಿಸಲಾಗಿದೆ.
ಉಡುಪಿಯ ಸಂತೋಷ್ ಕುಮಾರ್ ಎಂಬವರಿಗೆ 2024ರ ಸೆ.11ರಂದು ವ್ಯಾಟ್ಸಾಪ್ ನಲ್ಲಿ ವಿಡಿಯೋ ಕರೆ ಮಾಡಿ, ತಾನು ಮುಂಬಯಿ ಪೋಲಿಸ್ ಎಂದು ಮಾತನಾಡಿ ವರ್ಚುವಲ್ ಆರೆಸ್ಟ್ ಮಾಡುವುದಾಗಿ ಬೆದರಿಸಿ 89 ಲಕ್ಷ ರೂ ಹಣ ವರ್ಗಾಯಿಸಿದ್ದ. ಆ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆ ಬಗ್ಗೆ ತನಿಖೆ ಕೈಗೊಂಡ ಸೆನ್ ಠಾಣಾ ಪೋಲಿಸರು ಆರೋಪಿಯನ್ನು ಧಾರವಾಡದಲ್ಲಿ ಬಂಧಿಸಿದ್ದು, ಆತನಿಂದ 5 ಲಕ್ಷ ರೂ. ನಗದು ಹಾಗೂ ಈ ಹಿಂದೆ ಕೇರಳ ರಾಜ್ಯದ ಮೊಹಮ್ಮದ್ ನಿಶಾಮ್ ಸಿ.ಕೆ. ಎಂಬಾತನ ಖಾತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ವರ್ಗಾಯಿಸಿದ್ದ 2 ಲಕ್ಷ ರೂ. ಸೇರಿ ಒಟ್ಟು 7 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.
ಸೆನ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಸೆನ್ ಠಾಣೆಯ ಪ್ರವೀಣ್ ಕುಮಾರ್, ರಾಜೇಶ್, ಪ್ರವೀಣ್, ಉಡುಪಿ ನಗರ ಠಾಣೆಯ ಎಎಸ್ಐ ಸುಭಾಸ್, ಪಡುಬಿದ್ರಿ ಠಾಣಾ ಎಎಸ್ಐ ರಾಜೇಶ್ ಪಿ., ದೀಕ್ಷಿತ್, ಸುಕನ್ಯಾ ಮತ್ತು ಜ್ಯೋತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.