
ಕಾರ್ಕಳ,ಮೇ.15 : ಕಾರ್ಕಳ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನೂತನ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 15ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಜನಜಾಗೃತಿ ವೇದಿಕೆಯ ತ್ರೈಮಾಸಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ವೃಷಭರಾಜ ಕಡಂಬ ಅವರು ಜೇಸಿಐ ಕಾರ್ಕಳದ ಪೂರ್ವಾಧ್ಯಕ್ಷರಾಗಿ, ಜೇಸಿ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕರಾಗಿ, ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಶತಮಾನ ಕಂಡ ದುರ್ಗಾ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇದರ ಹಳೆವಿದ್ಯಾರ್ಥಿ ಸಂಘ ಹಾಗೂ ಜೋಡುರಸ್ತೆ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಕಮಲಾಕ್ಷ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಜನಜಾಗೃತಿ ಕಾರ್ಯಕ್ರಮದ 2026-27 ವರ್ಷದ ಕ್ರಿಯಾ ಯೋಜನೆ ಅನುಷ್ಠಾನ, ನವಜೀವನ ಸಮಿತಿ ಬಲವರ್ಧನೆ ಮತ್ತು ಮದ್ಯವರ್ಜನ ಶಿಬಿರ ಸ್ವಾಸ್ತ್ರ ಸಂಕಲ್ಪ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ತಾಲೂಕಿನ ವಲಯ ಮೇಲ್ವಿಚಾರಕರು ಜನಜಾಗೃತಿ ಸಾಧನಾ ವರದಿ ಮಂಡಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕಮಲಾಕ್ಷ ನಾಯಕ್, ತ್ರಿವಿಕ್ರಮ ಕಿಣಿ, ಹರಿಶ್ಚಂದ್ರ ತೆಂಡುಲ್ಕರ್ ಹಾಗೂ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ವಲಯ ಕಾರ್ಯದರ್ಶಿಗಳಾದ ಗೀತಾ, ಯಶೋಧ, ಸುಶೀಲಾ, ಬ್ರಿಜೇಶ್, ಶಿವರಾಮ್, ಕಚೇರಿ ಆಡಳಿತ ಪ್ರಬಂಧಕಿ ಸೌಮ್ಯ ಉಪಸ್ಥಿತರಿದ್ದರು. ಕ್ಷೇತ್ರ ಯೋಜನಾಧಿಕಾರಿ ಬಾಲಕ್ರಷ್ಣ ಹಿರಿಂಜ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ಗಿರೀಶ್ ಸ್ವಾಗತಿಸಿ, ದಿನೇಶ್ ವಂದಿಸಿದರು.



.
.
.
.
.
.
.
.
.
.
.
.
.
.
.
.
.
.
.
.
