ಮಂಗಳೂರು: ನಾಟ್ಯ, ಅರ್ಥಗಾರಿಕೆ, ವೇಷಭೂಷಣ, ಅಭಿನಯ,ಹಾಡುಗಾರಿಕೆ,ಹಿಮ್ಮೇಳ ಹೀಗೆ ಹತ್ತು ಹಲವು ವಿಚಾರಗಳನ್ನು ಕಲಿಯಬಹುದಾದ ಏಕೈಕ ಕಲೆ ಎಂದರೆ ಅದು ಯಕ್ಷಗಾನ. ವಿದ್ಯಾರ್ಥಿಗಳು ಎಳವೆಯಲ್ಲೇ ಯಕ್ಷ ಶಿಕ್ಷಣವನ್ನು ಪಡೆದುಕೊಂಡಾಗ ಸಂಸ್ಕಾರ ವೃದ್ಧಿಯಾಗುತ್ತದೆ ಮತ್ತು ಪುರಾಣದ ಪರಿಚಯವಾಗುತ್ತದೆ. ಈ ಎಲ್ಲ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು. ಈ ಶೈಕ್ಷಣಿಕ ವರ್ಷ ಸುಮಾರು 50 ಕ್ಕೂ ಹೆಚ್ಚು ಶಾಲೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣ ತರಬೇತಿಯನ್ನು ಯಕ್ಷ ಧ್ರುವ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದೆ.ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ ತಿಳಿಸಿದರು.
ಅವರು ಮಂಗಳೂರು ತಾಲೂಕು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಫೌಂಡೇಶನ್ ವತಿಯಿಂದ ನಡೆದ ಯಕ್ಷ ಶಿಕ್ಷಣ ತರಬೇತಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮುಡಿಪು ಘಟಕದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಉದ್ಘಾಟಿಸಿ, ಪ್ರತಿಯೊಬ್ಬರು ಕೂಡ ಕಲಿತ ವಿದ್ಯಾ ಸಂಸ್ಥೆ, ಕಲಿಸಿದ ಗುರುಗಳು, ಹೆತ್ತ ತಂದೆ ತಾಯಿ, ಹೊತ್ತ ನಾಡು ಇದನ್ನು ಮರೆಯಲೇಬಾರದು. ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುವಾಗ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತನ್ನನ್ನು ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ. ಇದರಿಂದ ಮುಂದಕ್ಕೆ ಉತ್ತಮ ನಾಯಕರಾಗಿ ಮೂಡಿ ಬರಬಹುದು. ಯಕ್ಷ ಧ್ರುವ ಫೌಂಡೇಶನ್ ನವರು ಈ ಸೇವೆಯನ್ನು ಕಳೆದ 9 ವರ್ಷಗಳಿಂದ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಯಕ್ಷಗಾನ ಗುರುಗಳಾದ ಅಶ್ವಥ್ ಮಂಜಿನಾಡಿ, ಗೌರವ ಉಪಸ್ಥಿತಿಯಾಗಿ ಶಾಲಾ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ, , Áಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ರೈ ,ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಪ್ರದೀಪ್ ಆಳ್ವ, ಸಾಮಾಜಿಕ, ಧಾರ್ಮಿಕ ಮುಂದಾಳು ಹಾಗು ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಸಂತೋಷ್ ಕುಮಾರ್ ರೈ ಬೋಳಿಯಾರು, ಯಕ್ಷಗಾನ ಗುರುಗಳಾದ ಅಶ್ವಥ್ ಮಂಜಿನಾಡಿ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಳೆದ ವರ್ಷ ಯಕ್ಷ ಧ್ರುವ – ಯಕ್ಷ ಶಿಕ್ಷಣ ತರಗತಿಯ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮಿಲನದಲ್ಲಿ ಪ್ರಶಸ್ತಿ ವಿಜೇತ ಸಂಸ್ಥೆಯ ಮಕ್ಕಳನ್ನು ಅಭಿನಂದಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕ ರವಿಶಂಕರ್ ವಂದಸಿ, ಶಿಕ್ಷಕ ಕೃಷ್ಣ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರುಗಳಾದ ಶ್ರೀಮತಿ ಕುಮುದ, ಶ್ರೀ ಶಿವಣ್ಣ, ಶ್ರೀಮತಿ ಸ್ಮಿತಾ ಸಹಕರಿಸಿದರು.














