ಬೆಂಗಳೂರು: ಉಡುಪಿ ಸೇರಿದಂತೆ ಬಾಕಿ ಇರುವ 10 ಜಿಲ್ಲಾ ಘಟಕಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷರನ್ನು ನೇಮಿಸಿ ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಜೂನ್ 11 ರಂದು ಆದೇಶ ಹೊರಡಿಸಿದ್ದಾರೆ. ಪಕ್ಷದ ಸಂಘಟನೆಯನ್ನು ಸಧೃಡಗೊಳಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಶಕ್ತಿ, ಪಕ್ಷ ವರ್ಚಸ್ಸು ಹೆಚ್ಚಿಸುವಲ್ಲಿ ಶ್ರಮಿಸುವಿರಿ ಎಂದು ಗಣೇಶ್ ಕಾರ್ಣಿಕ್ ಅವರು ನೂತನ ಜಿಲ್ಲಾಧ್ಯಕ್ಷರುಗಳಿಗೆ ಶುಭ ಹಾರೈಸಿದ್ದಾರೆ.
ಈ ಹಿಂದೆ 23 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಇದೀಗ ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ.
ಮೈಸೂರು ಗ್ರಾಮಾಂತರ ಜಿಲ್ಲೆಗೆ ಕೆಎನ್ ಸುಬ್ಬಣ್ಣ, ಹಾಸನ ಜಿಲ್ಲೆಗೆ ಸಿದ್ದೇಶ್ ನಾಗೇಂದ್ರ, ಕೊಡಗು ಜಿಲ್ಲೆಗೆ ರವಿ ಕಾಳಪ್ಪ, ಉಡುಪಿ ಜಿಲ್ಲೆಗೆ ಕುತ್ಯಾರು ನವೀನ್ ಶೆಟ್ಟಿ, ದಾವಣಗೆರೆ ಜಿಲ್ಲೆಗೆ ಎನ್ ರಾಜಶೇಖರ, ಹಾವೇರಿ ಜಿಲ್ಲೆಗೆ ವಿರೂಪಾಕ್ಷಪ್ಪ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗೆ ಕೆ.ಟಿ. ಕುಮಾರಸ್ವಾಮಿ, ತುಮಕೂರು ಜಿಲ್ಲೆಗೆ ಎಚ್.ಎಸ್. ರವಿಕುಮಾರ್, ಮಧುಗಿರಿ ಜಿಲ್ಲೆಗೆ ಚಿದಾನಂದ ಗೌಡ, ಚಿಕ್ಕಬಳ್ಳಾಪುರ ಜಿಲ್ಲೆಗೆ ಎಸ್.ವಿ. ರಾಮಚಂದ್ರ ಗೌಡ (ಸೀಕಲ್)ರನ್ನು ನೇಮಕ ಮಾಡಲಾಗಿದೆ.