
ಕಾರ್ಕಳ, ಜೂ.25: ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ದೇವಸ್ಥಾನದ ಬ್ಯಾಂಕ್ ಖಾತೆಯಿಂದ ಹಣ ಎಗರಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ನಿವಾಸಿ ಅಕ್ಷಯ ದೇವಾಡಿಗ (29) ಎಂಬಾತ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್ ಕಳವುಗೈದು ಹಣ ಡ್ರಾ ಮಾಡಲು ಯತ್ನಿಸಿದ ಆರೋಪಿ.
ಅಕ್ಷಯ ದೇವಾಡಿಗ ಕಳೆದ 4 ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಈ ಅವಧಿಯಲ್ಲಿ ಸೇವಾ ರೂಪದಲ್ಲಿ ಸಂಗ್ರಹವಾದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಈ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಕಂಡಬಂದಿತ್ತು. ಅಕ್ರಮ ನಡೆದ ಕುರಿತು ಅಕ್ಷಯ ಬಳಿ ವಿವರಣೆ ಕೇಳಿದಾಗ ಆತ ಮಾಹಿತಿ ನೀಡದೇ ಮೇ 7 ರಂದು ಕೆಲಸಕ್ಕೆ ರಾಜೀನಾಮೆ ಪತ್ರ ನೀಡಿ ಕೆಲಸಕ್ಕೆ ಗೈರಾಗಿದ್ದ. ಆತ ರಾಜೀನಾಮೆ ನೀಡುವ ಸಂದರ್ಭದಲ್ಲಿ ಐಓಬಿ ಬ್ಯಾಂಕಿನಲ್ಲಿದ್ದ ದೇವಸ್ಥಾನದ ಎರಡು ಖಾತೆಗಳ ಒಟ್ಟು 6 ಚೆಕ್ ಗಳನ್ನು ಕಳವುಗೈದು ತನ್ನ ಬಳಿ ಇರಿಸಿಕೊಂಡು, ತದನಂತರ ಜೂ. 24 ರಂದು ಬುಧವಾರ ಚೆಕ್ ಗಳನ್ನು ನಗದೀಕರಣ ಮಾಡಲು ಬ್ಯಾಂಕಿಗೆ ಬಂದಿದ್ದ. ಈ ಸಂದರ್ಭದಲ್ಲಿ ಸಹಿ ಕುರಿತು ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಚೆಕ್ ನಗದೀಕರಣಕ್ಕೆ ನಿರಾಕರಿಸಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಅಕ್ಷಯ ದೇವಾಡಿಗ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ನಕಲಿ ಸಹಿ ಮಾಡಿ ಹಣ ಎಗರಿಸಲು ಯತ್ನಿಸಿದ್ದು, ಆತನ ವಿರುದ್ಧ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಬಂಗೇರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
