ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕುಕ್ಕನೀರ ವೆಂಕಟಾಪುರ ಹೊಳೆಯಲ್ಲಿ ಗರ್ಭ ಧರಿಸಿದ ಹಸುವನ್ನು ಕೊಂದು ಭ್ರೂಣವನ್ನು ಎಸೆದುಹೋದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮೂಲದ ಇಬ್ರಾಹಿಂ ಮೊಹ್ಮದ್ ಹುವಾ (45) ಬಂಧಿತ ಆರೋಪಿ. ಕುಕ್ಕನೀರ ವೆಂಕಟಾಪುರ ಹೊಳೆಯ ದಂಡೆಯಲ್ಲಿ ಎರಡು ದಿನದ ಹಿಂದೆ ಕರುವಿನ ಭ್ರೂಣವಿರುವ ಚೀಲ ಪತ್ತೆಯಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸು ಹತ್ಯೆ ಮಾಡಿದ ಘಟನೆ ಮಾಸುವ ಮುಂಚೆಯೇ ಗೋ ಹಂತಕರು ಇದೀಗ ಭಟ್ಕಳದಲ್ಲೂ ಅದೇ ಮಾದರಿಯ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿತ್ತು. ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆ ಮೇಲೆ ಗರ್ಭಿಣಿ ಹಸುವನ್ನು ಹತ್ಯೆ ಗೈದು ಗೋ ಭಕ್ಷಕರು ಅದರ ಅಂಗಾAಗ ಹಾಗೂ ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು ಎಸೆದು ಹೋಗಿರುವುದು ಪತ್ತೆಯಾಗಿತ್ತು.
ಪಾಪಿಗಳು ಗರ್ಭಿಣಿ ಹಸುವನ್ನು ಹಿಂಸಾತ್ಮವಾಗಿ ಕೊಂದು ಅದರ ಅಂಗಭಾಗಗಳನ್ನು ಮತ್ತು ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು ವೆಂಕಟಾಪುರ ಕುಕ್ಕನೀರ ಹೊಳೆಯ ದಂಡೆ ಮೇಲೆ ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದರು. ಬೀದಿ ನಾಯಿಯೊಂದು ಚೀಲವನ್ನು ಹರಿಯುವ ವೇಳೆ ಘಟನೆ ಬೆಳಕಿಗೆ ಬಂದಿದೆ.ಬಳಿಕ ವಿಷಯ ತಿಳಿದು ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎಸ್.ಪಿ ಎಂ ನಾರಾಯಣ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಕೃತ್ಯ ನೆಡೆಸಿದವರನ್ನು ಬಂಧಿಸಲು ತಂಡ ರಚಿಸಿದ್ದರು. ಇದೀಗ ಘಟನೆ ನಡೆದು ಎರಡು ದಿನದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.