ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿAದ ಮಾವೋವಾದಕ್ಕೆ ಹೊರಳಿದೆ. ಫೇಸ್ ಬುಕ್ ನಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವವರು, ಈಗ ಬಂದೂಕು ಹಿಡಿದು ಗುಂಡಿಟ್ಟು ಭಯ ಸೃಷ್ಟಿಸುವವರಿಗೆ ಹೂಗುಚ್ಚ ಕೊಟ್ಟು ಸ್ವಾಗತಿಸಿ ಸಮೋಸಾ ನೀಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಅರ್ಬನ್ ನಕ್ಸಲರ ಪಾಲಿಟ್ ಬ್ಯೂರೋ ಆಗಿ ಬದಲಾಗಿದೆ. ಖುದ್ದು ಸಿದ್ದರಾಮಯ್ಯನವರೇ ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ತತ್ವ- ಸಿದ್ಧಾಂತ ಅರ್ಬನ್ ನಕ್ಸಲರು ಹೈಜಾಕ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಶರಣಾದ ರೀತಿ, ಪ್ಯಾಕೇಜ್ ಘೋಷಣೆ ವಿಧಾನ, ಪ್ರಕರಣ ರದ್ಧತಿ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪವಿದೆ. ಸಿದ್ದರಾಮಯ್ಯನವರ ಕೋರ್ ಕಮಿಟಿ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಅರಚಿದರೂ ನಾವು ಹೆದರುವುದಿಲ್ಲ. ಅಷ್ಟಕ್ಕೂ ಬೇಕಾಬಿಟ್ಟಿ ಪ್ಯಾಕೇಜ್ ಘೋಷಿಸುವುದಕ್ಕೆ ರಾಜ್ಯದ ಬೊಕ್ಕಸದ ಹಣ ಯಾರದೋ ಜಮೀನು ನುಂಗಿ- ನೀರು ಕುಡಿದು ಸಂಪಾದಿಸಿದ ಸ್ವಯಾರ್ಜಿತ ಸೈಟಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶರಣಾಗತಿ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ವಿಕ್ರಮ್ ಗೌಡ ಎನ್ ಕೌಂಟರ್ ಬಳಿಕ ಅರ್ಬನ್ ನಕ್ಸಲರು ಶರಣಾಗತಿ ಪ್ರಕ್ರಿಯೆ ಬಗ್ಗೆ ನಡೆಸಿದ ಪ್ರಹಸನದಲ್ಲಿ ಸಿಎಂ ನಿರ್ದೇಶನದ ಭಾಗವೆಷ್ಟು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ. ಒಂದೆಡೆ ನಕ್ಸಲ್ ಶರಣಾಗತಿ ಬಗ್ಗೆ ಮಾತನಾಡುವ ಸರ್ಕಾರ, ಅರಣ್ಯ ವಾಸಿಗಳಿಗ ಪುನರ್ಸತಿ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.