ಹೆಬ್ರಿ: ಹೆಬ್ರಿ ತಾಲೂಕಿನ ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದ ಹುಂಡಿಯ ಹಣವನ್ನು ಕಳವುಗೈದಿರುವ ಘಟನೆ ಜೂ.3 ಮಂಗಳವಾರ ಮುಂಜಾನೆ ನಡೆದಿದೆ.
ಜೂ.2 ಭಾನುವಾರ ರಾತ್ರಿ ದೇವಸ್ಥಾನದ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಮತ್ತು ಇತರರು ದೇವಸ್ಥಾನ ಸ್ವಚ್ಛಗೊಳಿಸಿ ಮನೆಗೆ ತೆರಳಿದ್ದರು. ಸುಕುಮಾರ್ ಅವರ ಮನೆ ದೇವಸ್ಥಾನಕ್ಕೆ ಸಮೀಪವೇ ಇದ್ದು ತಡರಾತ್ರಿ 12.40 ರ ಸುಮಾರಿಗೆ ದೇವಳದಲ್ಲಿ ಶಬ್ದ ಬಂದಿದ್ದು ನೋಡುವಾಗ ವ್ಯಕ್ತಿಯೊಬ್ಬ ದೇವಸ್ಥಾನ ಕಡೆಯಿಂದ ಓಡಿ ಹೋಗಿ ಬೈಕಿನಲ್ಲಿ ಪರಾರಿಯಾಗಿದ್ದ. ಅದೇ ವೇಲೆ ಸ್ಥಳಕ್ಕೆ ಬಂದ ಸ್ಥಳೀಯರಾದ ಸಂದೀಪ್ ಮತ್ತು ಕಿರಣ್ ಬೈಕಿನಲ್ಲಿ ಆ ವ್ಯಕ್ತಿಯನ್ನು ಹಿಂಬಾಲಿಸಿದರೂ ಅತ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ಬಳಿಕ ದೇವಳದ ಒಳಗೆ ಹೋಗಿ ಪರಿಶೀಲಿಸಿದಾಗ ಆದಿಶಕ್ತಿ ದೇವರು, ನಂದಿಕೇಶ್ವರ ದೇವರು, ಬ್ರಹ್ಮ ಬೈದರ್ಕಳ ಗುಡಿಗಳ ಹುಂಡಿಗಳನ್ನು ಒಡೆದು ಅದರಲ್ಲಿದ್ದ ನಗದನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.