ಉಡುಪಿ : ಉಡುಪಿ ನಗರದ ಬನ್ನಂಜೆಯಲ್ಲಿ ವಿಜಯನಗರದ ಕಾಲದ್ದು ಎಂದು ಹೇಳಲಾಗುತ್ತಿರುವ ಉಬ್ಬು ಚಿತ್ರವಿರುವ ಅಪರೂಪದ ಐತಿಹಾಸಿಕ ಶಾಸನ ಪತ್ತೆಯಾಗಿದೆ.
ಬನ್ನಂಜೆಯ ಮೂಡನಿಡಂಬೂರು ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಈ ಅಪರೂಪದ ಶಾಸನ ಪತ್ತೆಯಾಗಿದ್ದು, ಸ್ಥಳೀಯರು ಹೇಳುವ ಪ್ರಕಾರ ಬಾಯಿಮಾತಿನಲ್ಲಿ ಇದನ್ನು ‘ನಿರ್ಪುಗಲ್ಲು’ ಎಂದೇ ಕರೆಯಲಾಗುತ್ತಿತ್ತಂತೆ. ಸುಮಾರು ಒಂದುವರೆ ಅಡಿ ಅಗಲ ನಾಲ್ಕು ಫೀಟು ಎತ್ತರ ಇರುವ ಈ ಶಾಸನದ ಬಲಭಾಗದಲ್ಲಿ ಚಂದ್ರ, ಎಡ ಭಾಗದಲ್ಲಿ ಸೂರ್ಯ. ಮಧ್ಯಭಾಗದಲ್ಲಿ ಪೀಠ ಇರುವ ಶಿವಲಿಂಗದ ಚಿತ್ರವಿದೆ.

ಶಾಸನದ ಕೆಳಭಾಗದಲ್ಲಿ ಮಾನವ ವೀರಪುರುಷನಂತೆ ಖಡ್ಗ ಮತ್ತು ಗುರಾಣಿ ಹಿಡಿದಿರುವಂತೆ ವಸ್ತ್ರ ಸಹಿತ (ಚಲ್ಲಣಹಾಕಿದಂತೆ) ಕಂಡು ಬಂದಿದೆ. ಓರೆಮುಖ ಎತ್ತರಕ್ಕೆ ಮಾಡಿ ಎಡಗಾಲು ಎತ್ತಿಕೊಂಡು ವೀರ ಪುರುಷನಂತೆ ನಿಂತಿರುವ ಉಬ್ಬುಶಿಲ್ಪ ಇದಾಗಿದೆ. ಕೆಳಗಡೆ ಪೀಠವಿದೆ. ಈ ಶಾಸನದ ಪಕ್ಕದಲ್ಲಿ ಉತ್ತರಕರ್ನಾಟಕ ಮೂಲದವರು ಬಿಡಾರ ಬಿಟ್ಟಿದ್ದಾರೆ. ಅವರು ಈ ಭಾಗದಲ್ಲಿ ಗಿಡಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿ ಈ ಉಬ್ಬು ಶಾಸನದಲ್ಲಿ ಚಿತ್ರವನ್ನು ಹನುಮನೆಂದು ತಿಳಿದು ದಿನನಿತ್ಯ ಗಂಧ, ಕುಂಕುಮ ದೀಪ ಶೇಡಿಗಳನ್ನುಹಚ್ಚಿ ನಿತ್ಯ ಪೂಜೆ ಮಾಡುತ್ತಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ಮೂಡನಿಡಂಬೂರು ಗ್ರಾಮಕ್ಕೆ ನೆರೆ ಹಾವಳಿ ಸಂಭವಿಸಿದಾಗಲೂ ಇದರ ಸ್ವಲ್ಪ ತಲೆಭಾಗ ದೂರದಿಂದ ಕಾಣುತ್ತಿತ್ತು. ಪಕ್ಕದಲ್ಲಿ ಮೂಡನಿಂಡಬೂರು ಬ್ರಹ್ಮ ಬೈದರ್ಕಳ ಗರೋಡಿ ಇದೆ. ಹಿಂದಿನ ತಲೆಮಾರಿನವರನ್ನು ವಿಚಾರಿಸಿದಾಗ ದೈವವು ಸಂಚಾರ ಹೋಗುವಾಗ ದೊಂದಿ ಬೆಳಕನ್ನು ( ತೂಟೆ) ಅಲ್ಲಿ ಇಟ್ಟು ವಿಧಿ ವಿಧಾನಗಳನ್ನು ಮಾಡಿ ನಂತರ ಮುಂದಿನ ಕಡೆಗೆ ಸಂಚರಿಸುವ ಪದ್ಧತಿ ಇತ್ತು ಎಂದು ಕಣ್ಣಾರೆ ಕಂಡವರು ಹೇಳುತ್ತಾರೆ.

ಮಣಿಪಾಲದ ಹಸ್ತ ಶಿಲ್ಪದಲ್ಲಿ ಗೈಡ್ ಆಗಿರುವ ಸುಭಾಷ್ ಪೂಜಾರಿ ಅವರು ಹೇಳುವ ಪ್ರಕಾರ ಈ ಭೂ ಪ್ರದೇಶ ಗದ್ದೆಯ ಪ್ರದೇಶವಾಗಿತ್ತು. ಅಂದಿನ ಕಾಲದಲ್ಲಿ ಗದ್ದೆಯಲ್ಲಿ ಉತ್ತಮ ಬೆಳೆಯಾದಾಗ ಈ ಶಾಸನದ ಮೇಲೆ ಬೆಳೆದ ಬತ್ತದ ಫಸಲನ್ನು ಇಟ್ಟು ಕೈಮುಗಿಯುವ ಪ್ರತೀತಿ ಇತ್ತಂತೆ. ಈಗ ನಗರೀಕರಣವಾದ್ದರಿಂದ ವಸತಿ ಸಮುಚ್ಚಯ ಈ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತೆ. ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವು ಮತ್ತೆ ಗೋಚರಿಸುವಂತಾಗಿದೆ ಸಂಬAಧಪಟ್ಟವರು ಹೆಚ್ಚಿನ ಅಧ್ಯಯನ ನಡೆಸಿದರೆ ಈ ಶಾಸನವು ಇಲ್ಲಿರುವುದರ ಜೊತೆಗೆ ಸ್ಥಳ ಪುರಾಣಕ್ಕೆ ಹೊಸ ಬೆಳಕು ಚೆಲ್ಲಬಹುದು. ಶಾಸನದ ಕೆಳಭಾಗ ಮಣ್ಣಿನಲ್ಲಿ ಈಗಲೂ ಹೂತುಹೋಗಿದೆ ಎನ್ನುತ್ತಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಸುಭಾಷ್ ಪೂಜಾರಿ, ಹರೀಶ್ ಪೂಜಾರಿ, ಜಯಶೆಟ್ಟಿ ಬನ್ನಂಜೆ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ ಸರಳೇಬೆಟ್ಟು ಜೊತೆಗಿದ್ದರು.

ಮಾಹಿತಿ ಪಡೆದ ಶಿರ್ವ ಎಂಎಸ್ಆರ್ಎಸ್ ,ಕಾಲೇಜಿನ ಚರಿತ್ರೆ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರೊ| ಟಿ. ಮುರುಗೇಶಿಯವರು ಇದೊಂದು ವೀರಗಲ್ಲು ವಿಜಯನಗರ ಕಾಲದ್ದು ಆಗಿರಬಹುದು. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

