ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಲು ನಿರಾಕರಿಸಿದ್ದರ ಹಿಂದೆ ರಾಜ್ಯ ಬಿಜೆಪಿ ನಾಯಕರ ಕೈವಾಡವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಅನ್ನ ಭಾಗ್ಯದ ಅಕ್ಕಿ ಕೊಡಲು ಸಾಧ್ಯ ವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ತಮ್ಮ ಆಡಳಿತದ ಅವದಿಯಲ್ಲಿ ಅನ್ನ ಭಾಗ್ಯದ ಅಕ್ಕಿಗೆ ಕೊಕ್ಕೆ ಹಾಕಿದ್ದ ಇವರ ಹೇಳಿಕೆಗಳ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಭಾರತ ವಿಶ್ವದ 2ನೇ ಅತಿದೊಡ್ಡ ಅಕ್ಕಿ ಉತ್ಪಾದನೆ ಹಾಗೂ ರಫ್ತುದಾರ ರಾಷ್ಟ್ರವಾಗಿದ್ದು ವಾರ್ಷಿಕ ಸುಮಾರು 1200 ಲಕ್ಷ ಟನ್ ಅಕ್ಕಿ ಉತ್ಪಾದನೆಯಾದರೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಸುಮಾರು 220 ಲಕ್ಷ ಟನ್ ರಫ್ತು ಆಗುತ್ತದೆ. ಭಾರತೀಯ ಆಹಾರ ನಿಗಮದ ಅಕ್ಕಿ ಸಂಗ್ರಹದ ನಿರ್ದಿಷ್ಟ ಮಿತಿ 210ಲಕ್ಷ ಟನ್ನಿನ ಹೊರತಾಗಿಯೂ ನಿಗಮದಲ್ಲಿ 600 ಲಕ್ಷ ಟನ್ ಅಕ್ಕಿ ಸಂಗ್ರಹವಿದೆ ಎನ್ನಲಾಗಿದೆ ಅಂದರೆ ನಿಗಮದಲ್ಲಿ 390 ಲಕ್ಷ ಟನ್ ಹೆಚ್ಚುವರಿ ಸಂಗ್ರಹವಿದೆ.
ಅದರೊಂದಿಗೆ ನಿಗಮದಲ್ಲಿ ಈಗಾಗಲೆ 240 ಲಕ್ಷ ಟನ್ ಭತ್ತ ಸಂಗ್ರಹವಿದ್ದು ಇದರಿಂದ 140ಲಕ್ಷ ಟನ್ ಅಕ್ಕಿಯನ್ನು ನಿರೀಕ್ಷಿಸಬಹುದಾಗಿದೆ. ಅಂದರೆ ಕೇಂದ್ರ ಸರಕಾರದಲ್ಲಿರುವ ಪರೋಕ್ಷ ಅಕ್ಕಿ ಸಂಗ್ರಹ ಸುಮಾರು 740 ಲಕ್ಷ ಟನ್ ಆಗಿದೆ. ಇಂತಹ ಬೃಹತ್ ಉತ್ಪಾದನೆ ಮತ್ತು ಸಂಗ್ರಹದ ಹೊರತಾಗಿಯೂ ಕೇಂದ್ರ ಸರಕಾರ ರಾಜ್ಯದ ಅನ್ನ ಭಾಗ್ಯದ ಯೋಜನೆಗಾಗಿ 30 ಲಕ್ಷ ಟನ್ ಅಕ್ಕಿ ಬೇಡಿಕೆಯನ್ನು ತಿರಸ್ಕರಿಸಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡಿದ ಮಹಾಮೋಸ ಎಂದು ಕಾಂಗ್ರೆಸ್ ಹೇಳಿದೆ.
ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಅನ್ನಭಾಗ್ಯ ಅಕ್ಕಿ ಕೊಡದೇ ರಾಜ್ಯ ಸರಕಾರವನ್ನು ವಚನ ಭ್ರಷ್ಟ ಎಂಬ ಸುಳ್ಳು ಆರೋಪ ಹೊರಿಸಿ ಕಾಂಗ್ರೆಸ್ ಪಕ್ಷದ ಸಾಧನೆಗೆ ಮಸಿ ಬಳಿಯುವ ಹುನ್ನಾರವನ್ನು ಬಿಜೆಪಿ ನಾಯಕರು ಮಾಡುತ್ತಿದ್ದು, ಈ ದ್ವಿಮುಖ ನಡೆಯನ್ನು ರಾಜ್ಯದ ಜನತೆ ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಭಾರತೀಯ ಆಹಾರ ನಿಗಮದಿಂದ ಕೇಂದ್ರ ಸರಕಾರ ನಿಗದಿ ಪಡಿಸಿದ ಮಾರುಕಟ್ಟೆ ಬೆಲೆಯಲ್ಲಿ ಅಕ್ಕಿ ಗೋದಿ ಹಾಗೂ ಇತರೇ ಧಾನ್ಯಗಳನ್ನು ಖರೀದಿಸುವುದು ರಾಜ್ಯದ ಹಕ್ಕು. ಆದ್ಯತೆಯ ಮೇಲೆ ಕೊಡುವುದು ಕೇಂದ್ರದ ಕರ್ತವ್ಯ. ಕೇಂದ್ರ ಸರಕಾರದ ಈ ನಿರಾಕರಣೆ ಸಂವಿಧಾನ ವಿರೋಧಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ