ಕಾರ್ಕಳ:ಅತ್ತೂರು ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನವು ಅತ್ಯಂತ ಸಂಭ್ರಮದಿಂದ ಜರುಗಿತು.
ಪುಣ್ಯಕ್ಷೇತ್ರದ ಮಹೋತ್ಸವದ ಸಂದರ್ಭದಲ್ಲಿ ಜಗತ್ತಿನ ಒಳಿತಿಗಾಗಿ ಎಡೆಬಿಡದೆ ಪ್ರಾರ್ಥಿಸೋಣ ಎಂಬ ದಿನದ ವಿಷಯವನ್ನು ಧ್ಯಾನಿಸಲಾಯಿತು. ಶಸ್ತ್ರಚಿಕಿತ್ಸೆ ಕೆಲಸ ಮಾಡುವುದಿಲ್ಲ, ತಂತ್ರಜ್ಞಾನ ಕೆಲಸಮಾಡುವುದಿಲ್ಲ. ಮೊಣಕಾಲೂರಿ, ನಿರಂತರ ಪ್ರಾರ್ಥಿನೆ ಮಾಡಿದರೆ ಫಲವನ್ನು ಕೊಡುತ್ತದೆ. ಪ್ರಾರ್ಥನೆ ರೀತಿನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ. ಪ್ರಾರ್ಥನೆಯಲ್ಲಿ ೩ ಹಂತಗಳಿವೆ ವಿಶ್ವಾಸ, ಆಸೆ ಬಯಕೆ, ಆಂತರಿಕ ಸ್ವಾತಂತ್ರ್ಯ ಎಂಬ ಸಂದೇಶವನ್ನು ನೀಡಿದರು.
ಭಕ್ತಜನಸಾಗರ ಎಂದಿನಂತೆ ಬಸಿಲಿಕದ ವಠಾರದಲ್ಲಿ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಮಗ್ನರಾಗಿ ಪ್ರಾರ್ಥಿಸಿದರು. ಜನವರಿ 22 ರಂದು ಬೆಳಿಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಟಾಪಿಸಿದರು. ಅಂತೆಯೇ ಭಕ್ತಜನರು ಆ ಸಂಪುಟದ ದಿವ್ಯದರ್ಶನ ಹಾಗೂ ಆಶೀರ್ವಾದಕ್ಕಾಗಿ ಭಕ್ತಿಯಿಂದ ಪಾಲ್ಗೊಂಡರು.
ವಾರ್ಷಿಕ ಮಹೋತ್ಸವದ ಪ್ರಮುಖ ಅಂಗವಾಗಿ ಗಾಯನ ಬಲಿಪೂಜೆಯನ್ನು ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ನೆರವೇರಿಸಿ ಪ್ರಾರ್ಥನಾ ವಿಷಯವಾಗಿ ಪ್ರಬೋಧನೆಯನ್ನು ನೀಡಿದರು.
ಲೂಕನ ಶುಭ ಸಂದೇಶದಿಂದ ಆರಿಸಲ್ಪಟ್ಟಂತಹ ದೈವವಾಕ್ಯ “ಎಡೆಬಿಡದೆ ಪ್ರಾರ್ಥಿಸೋಣ” ಪ್ರವಚನಕ್ಕೆ ಆರಿಸಲ್ಪಟ್ಟ ಪ್ರಮುಖ ಚಿಂತನಾ ವಿಷಯವಾಗಿತ್ತು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜೋಯ್ ಜೊಲ್ಸನ್ ಅಂದ್ರಾದೆ, ಕಲ್ಯಾಣ್ಪುರ್, ವಂದನೀಯ ಜೆ.ಬಿ. ಸಲ್ಡಾನ್ಹ ಬಿಜೈ ಮಂಗಳೂರು, ವಂದನೀಯ ಡಾ. ರೋಷನ್ ಡಿ’ಸೋಜ, ಕುಲಪತಿ, ಉಡುಪಿ ಧರ್ಮಕ್ಷೇತ್ರ, ವಂದನೀಯ ವಿಜಯ್ ಡಿ’ಸೋಜ ಪಾಂಗ್ಳಾ, ವಂದನೀಯ ಬೊನವೆಂಚರ್ ನಜ್ರೆತ್ ಮಿಲಾಗ್ರಿಸ್ ಮಂಗಳೂರು, ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ವಂದನೀಯ ಪೌಲ್ ರೇಗೊ ವಲಯಾಧಿಕಾರಿಗಳು, ಕಾರ್ಕಳ ವಲಯ.
ಜನಸ್ತೋಮವು ಸೂರ್ಯಾಸ್ತಮಯ ಸಮಯದಲ್ಲಿ ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿ, ದಿವ್ಯ ತೈಲವನ್ನು ಸ್ವೀಕರಿಸಿ, ಪವಿತ್ರ ಪುಪ್ಕರಣಿಯ ಸನ್ನಿಧಿಗೆ ಭೇಟಿ ನೀಡಿ ಪುಣ್ಯಕ್ಷೇತ್ರದ ಪುಣ್ಯ ತೀರ್ಥವನ್ನು ಪಡೆದು, ಜಪತಪ ಪ್ರಾರ್ಥನೆ ಹಾಗೂ ಬಸಿಲಿಕದ ಶ್ರೇಷ್ಠ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 8 ಗಂಟೆಗೆ ನೆರವೇರಿಸಿ ಮಹೋತ್ಸವದ ದ್ವಿತೀಯ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಭಕ್ತಿ-ಆಚರಣೆಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ