ಮಂಗಳೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರಗೈದ ಮೂವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 1.65 ಲಕ್ಷ ರೂ. ದಂಡವನ್ನು ಪಾವತಿಸಲು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
ಮಂಗಳೂರು ತಾಲೂಕಿನ ಮೂಳೂರು ಗ್ರಾಮದ ಕಿನ್ನಿಕಂಬ್ಳ ನಿವಾಸಿ ಮುಹಮ್ಮದ್ ಶಾಕೀರ್ (26), ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ಅಬ್ದುಸ್ಸಮದ್ (32), ಬಂಟ್ವಾಳ ತಾಲೂಕಿನ ಪರ್ಲಿಯಾ ಕೈಕಂಬದ ಅಭಿಜಿತ್ ಯಾನೆ ಅಭಿ (27) ಶಿಕ್ಷೆಗೊಳಗಾದ ಆರೋಪಿಗಳು.
2021ರ ಡಿ.7ರಂದು ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ತಂಗುದಾಣದ ಬಳಿಯಿಂದ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಗೆ ಮೊದಲ ಇಬ್ಬರು ಆರೋಪಿಗಳು ಮೊಬೈಲ್ ಮತ್ತು ಹೊಸ ಬಟ್ಟೆಗಳನ್ನು ತೆಗೆದುಕೊಡುವುದಾಗಿ ಆಮಿಷವೊಡ್ಡಿ ಮಂಜೇಶ್ವರ ಕೆಜೆಎಂ ರೋಡ್ ಜಂಕ್ಷನ್ಗೆ ಕರೆಸಿಕೊಂಡು ಪಕ್ಕದಲ್ಲಿರುವ ಲಾಡ್ಜ್ಗೆ ಕರೆದೊಯ್ದು ಸಿಗರೇಟ್, ಗಾಂಜಾ ಬೆರೆಸಿದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದರು.
ಡಿ.11ರ ರಾತ್ರಿ 7:15ಕ್ಕೆ ಆರೋಪಿಗಳು ಬಾಲಕಿಯನ್ನು ನಾಟೆಕಲ್ಗೆ ಕರೆದುಕೊಂಡು ಹೋಗಿ 3ನೇ ಆರೋಪಿ ಅಭಿಜಿತ್ನ ಕಾರಿನಲ್ಲಿ ಕಳುಹಿಸಿದ್ದರು. ಅಭಿಜಿತ್ ತನ್ನ ಕಾರಿನಲ್ಲಿ ಪಜೀರ್ ಗ್ರಾಮದ ಕಂಬಪದವು ಎಂಬಲ್ಲಿನ ಅಪಾರ್ಟ್ಮೆಂಟ್ಗೆ ಕರೆದೊಯ್ದಿದ್ದ. ಅಲ್ಲೂ ಮೂವರು ಅತ್ಯಾಚಾರ ಎಸಗಿ ಇತರರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಬಾಲಕಿಯ ತಾಯಿ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಭಿಯೋಜನೆ ಪರ 15 ಮಂದಿ ಸಾಕ್ಷಿ ನುಡಿದಿದ್ದರು.
ಅದರಂತೆ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್.ಅವರು, ಆರೋಪಿಗಳಿಗೆ ಅತ್ಯಾಚಾರ ಮಾಡಿದ ಅಪರಾಧಕ್ಕೆ ಸೆ.376 (ಡಿ) ಮತ್ತು ಸೆ.6ರ ಪೊಕ್ಸೊ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ತಲಾ 40,000 ರೂ.ದಂಡ, ಸೆ.363ರ ಪ್ರಕಾರ 3 ವರ್ಷ ಸಾದಾ ಶಿಕ್ಷೆ ಮತ್ತು ತಲಾ ೫,೦೦೦ ರೂ.ದಂಡ, ಸೆ.೩೪೩ರ ಪ್ರಕಾರ ಆರೋಪಿಗಳಿಗೆ ೧ ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 2,000 ರೂ.ದಂಡ, ಸೆ.328ರ ಪ್ರಕಾರ ಆರೋಪಿಗಳಿಗೆ 3 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 5,000 ರೂ.ದಂಡ, ಸೆ. 506ರ ಪ್ರಕಾರ ಆರೋಪಿಗಳಿಗೆ 1 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 2,000 ರೂ. ದಂಡ, ಎನ್ಡಿಪಿಎಸ್ ಕಾಯ್ದೆ ಕಲಂ ೨೭(ಬಿ)ರ ಪ್ರಕಾರ ಆರೋಪಿಗಳಿಗೆ ೩ ತಿಂಗಳ ಸಾದಾ ಶಿಕ್ಷೆ ಮತ್ತು ತಲಾ ೫೦೦ ರೂ.ದಂಡ, ಎನ್ಡಿಪಿಎಸ್ ಕಾಯ್ದೆ ಕಲಂ 20(ಬಿ) (ಜಿಜಿ)ಎ ಪ್ರಕಾರ ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿರುತ್ತದೆ.
ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆಯಡಿ ಬಾಲಕಿಗೆ ಹೆಚ್ಚುವರಿಯಾಗಿ 2.35 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿರುತ್ತಾರೆ. ಸರಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದಿಸಿದ್ದರು.