ಕಾರ್ಕಳ: ಇತಿಹಾಸ ಪ್ರಸಿದ್ಧ ಮಿಯ್ಯಾರು ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಈ ಪ್ರಯುಕ್ತ ದೇವಳಕ್ಕೆ ಹಸಿರು ಹೊರೆ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ.
ಮಿಯ್ಯಾರು, ನಲ್ಲೂರು, ಮುಡಾರು, ರೆಂಜಾಳ ಹಾಗೂ ಇರ್ವತ್ತೂರು ಗ್ರಾಮಗಳನ್ನೊಳಗೊಂಡ ಮಹಾಲಿಂಗೇಶ್ವರ ದೇವಸ್ಥಾನವು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡು ಜ 16 ರಿಂದ ಜ 26ರವರೆಗೆ ಬ್ರಹ್ಮಕಲಶೋತ್ಸವ ಮಹೋತ್ಸವ ನಡೆಯಲಿದೆ.
ಈ ಪ್ರಯುಕ್ತ ಮಹಾಲಿಂಗೇಶ್ವರನಿಗೆ ಹಸಿರು ಹೊರೆಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಸುಮಾರು 125 ವಾಹನಗಳಲ್ಲಿ ಅಪಾರ ಪ್ರಮಾಣದ ದವಸ ಧಾನ್ಯಗಳು ತರಕಾರಿ, ಬೇಳೆಕಾಳುಗಳು, ಎಣ್ಣೆ ,ಬೆಲ್ಲ,ತೆಂಗಿನಕಾಯಿ ಸೀಯಾಳ ಬಾಳೆಗೊನೆ ಸೇರಿದಂತೆ ಹಲವಾರು ಹಸಿರುವಾಣಿ ಗಂಗಾಧರನ ಉಗ್ರಾಣ ಸೇರಿವೆ.
ಸುಮಾರು 20 ಟನ್ ಅಕ್ಕಿ, 15 ಸಾವಿರ ತೆಂಗಿನಕಾಯಿ,3 ಸಾವಿರ ಸೀಯಾಳ, 20 ಕ್ವಿಂಟಾಲ್ ಬೆಲ್ಲ, 100 ಕೆಜಿ ತುಪ್ಪ, 50 ಕ್ವಿಂಟಾಲ್ ತರಕಾರಿ ಅಂದಾಜು 100 ಡಬ್ಬಿ ಎಣ್ಣೆ, ಬೇಳೆಕಾಳುಗಳು, ಅಪಾರ ಪ್ರಮಾಣದ ಬಾಳೆಗೊನೆ, ಅಡಿಕೆ ಗೊನೆ,ಹಿಂಗಾರ ಸೇರಿದಂತೆ ಹಲವಾರು ಹಸಿರು ವಾಣಿಗಳನ್ನು ಭಕ್ತಾದಿಗಳು ಹಾಗೂ ಗ್ರಾಮಸ್ಥರು ಭಕ್ತಿ ಪೂರ್ವಕವಾಗಿ ಮಹಾಲಿಂಗೇಶ್ವರನಿಗೆ ಸಮರ್ಪಿಸಿದ್ದಾರೆ.
ಮಹಾಲಿಂಗೇಶ್ವರನ ಬ್ರಹ್ಮಕಲಶೋತ್ಸವಕ್ಕೆ ಭಕ್ತರು ಅಪಾರಪ್ರಮಾಣದ ಹಸಿರು ವಾಣಿ ಸಮರ್ಪಿಸಿದ್ದು, ನಿತ್ಯ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ರೂಪದಲ್ಲಿ ಪ್ರಸಾದ ವಿನಿಯೋಗವಾಗುತ್ತಿದೆ.