ಕಾರ್ಕಳ : ತನ್ನದೇ ಹುಟ್ಟಿದ ದಿನದ ಆಚರಣೆ ಸಲುವಾಗಿ ಕೇಕ್ ತರಲೆಂದು ಪೇಟೆಗೆ ಹೋಗಿ ವಾಪಾಸು ಮನೆಗೆ ಮರಳುತ್ತಿದ್ದಾಗ ಸ್ಕೂಟರ್ ಸ್ಕಿಡ್ಡಾಗಿ ನೀರು ಹರಿಯುತ್ತಿದ್ದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕಚೇರಿ ಸಮೀಪದ ಪರಪು ಸೇತುವೆಯ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಬಿಜೆಪಿ ಕಾರ್ಯಕರ್ತ ಹಾಗೂ ನಕ್ರೆ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಎಂಬವರು ಮೃತಪಟ್ಟ ಯುವಕ.
ಸುಬ್ರಹ್ಮಣ್ಯ ಸಾಲ್ಯಾನ್ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದರು. ಶನಿವಾರ ತನ್ನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಗುವಿಗೆ ಕೇಕ್ ತರಲು ಪೇಟೆಗೆ ಹೋಗಿದ್ದರು. ಆದರೆ ಮರಳಿ ಮನೆಗೆ ಬರದೇ ಇದ್ದಾಗ ಅವರನ್ನು ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ. ಭಾನುವಾರ ಮುಂಜಾನೆ ಮತ್ತೆ ಹುಡುಕಾಟ ನಡೆಸಿದಾಗ ಪರಪು ಸೇತುವೆ ಕೆಳಗೆ ತೋಡಿನಲ್ಲಿ ಸ್ಕೂಟರ್ ಹಾಗೂ ಸುಬ್ರಹ್ಮಣ್ಯ ಶವ ಪತ್ತೆಯಾಗಿದೆ.
ಸ್ಕೂಟರ್ ಮೇಲಿನಿಂದ ತೋಡಿಗೆ ಬಿದ್ದ ರಭಸಕ್ಕೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತನ್ನ ಹುಟ್ಟು ಹಬ್ಬದ ದಿನವೇ ವಿಧಿಯಾಟಕ್ಕೆ ಬಲಿಯಾಗಿರುವುದು ದುರಂತ.
ಮೃತರು ಪತ್ನಿ ಹಾಗೂ ಒಂದು ಮಗು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.