
ಕಾರ್ಕಳ,ಏ.23: ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಜನಸಾಮಾನ್ಯರಿಗೆ ಗಗನ ಕುಸುಮವಾಗಿದ್ದ ಕಾಲದಲ್ಲಿ ಕಾರ್ಕಳದಲ್ಲಿ ಸಹಕಾರಿ ಕ್ಷೇತ್ರವನ್ನು ಕಟ್ಟಿ ಬೆಳೆಸಬೇಕು ಎನ್ನುವ ಮಹದಾಸೆಯಿಂದ 1996ರಲ್ಲಿ ಜೋಡುರಸ್ತೆಯ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇಂದು ಮೂರು ದಶಕಗಳನ್ನು ಪೂರೈಸಿ ಇಂದು ತ್ರಿಂಶತಿ ಸಂಭ್ರಮದ ಹೊಸ್ತಿಲಿನಲ್ಲಿದೆ.
ಈ ಸಂಭ್ರಮಾಚರಣೆಯ ಸವಿ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ‘ಸಹಕಾರ ಸಿಂಧೂರ’ ವಾಣಿಜ್ಯ ಸಂಕೀರ್ಣವು ಏ. 26ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆಯಾಗಲಿದೆ ಎಂದು ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ತಿಳಿಸಿದರು.
ಅವರು ಏ.23 ರಂದು ಗುರುವಾರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1996ರಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಉದ್ಘಾಟನೆಯಾದ ಸಹಕಾರಿ ಸಂಸ್ಥೆ ಕೇವಲ 3 ಲಕ್ಷ ಬಂಡವಾಳ ಮತ್ತು 400 ಸದಸ್ಯರನ್ನು ಹೊಂದಿತ್ತು. ಇಂದು ಕೇಂದ್ರ ಕಚೇರಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ 8 ಶಾಖೆಗಳನ್ನು ಹೊಂದಿದೆ ಎಂದರು.ಕಳೆದ ಸಾಲಿನ ಆರ್ಥಿಕ ವರ್ಷದಲ್ಲಿ 1,150 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿ, 5.02 ಕೋಟಿ ರೂ.ಗಳ ದಾಖಲೆ ನಿವ್ವಳ ಲಾಭ ಗಳಿಸಿದೆ.ಕೇವಲ ಲಾಭದ ಉದ್ದೇಶವಲ್ಲದೇ ಸಮಾಜಮುಖಿ ಕೆಲಸಗಳಲ್ಲಿ ಕೂಡ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಗಿದೆ ಎಂದರು.
ಏ. 26 ರಂದು ಭಾನುವಾರ ಬೆಳಗ್ಗೆ 10:30 ಕ್ಕೆ ಸೊಸೈಟಿಯ ಲೋಕಾರ್ಪಣೆ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಕೈವಲ್ಯ ಮಠದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ, ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ। ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಸುನಿಲ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, IAS ಅಧಿಕಾರಿ ಸದಾಶಿವ ಪ್ರಭು, ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜೋಡುರಸ್ತೆಯ ಪ್ರಧಾನ ಕಚೇರಿ ಪಕ್ಕದ 62 ಸೆಂಟ್ಸ್ ನಿವೇಶನದಲ್ಲಿ ಸುಮಾರು 55,000 ಚದರ ಅಡಿ ವಿಸ್ತೀರ್ಣದ ಈ ಬೃಹತ್ ಸಂಕೀರ್ಣ ತಲೆ ಎತ್ತಿದೆ. ಇಲ್ಲಿ ಕಾರ್ಕಳದ ಆರ್ಥಿಕತೆಗೆ ಪೂರಕವಾಗುವಂತಹ ಹೊಸ ಉದ್ಯಮಗಳಿಗೆ ಅವಕಾಶ ನೀಡಲಾಗಿದೆ. ಲೋಕಾರ್ಪಣಾ ದಿನದಂದು ಬೆಳಗ್ಗೆ 9:30ರಿಂದ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3 ರಿಂದ ‘ಕರ್ಣಾರ್ಜುನ – ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಸಮಾರಂಭಕ್ಕೆ ಆಗಮಿಸುವ 7 ಸಾವಿರಕ್ಕೂ ಅಧಿಕ ಜನರಿಗೆ ಊಟೋಪಚಾರ ಹಾಗೂ ವಾಹನ ನಿಲುಗಡೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ನೀರೆ ರವೀಂದ್ರ ನಾಯಕ್, ಸಿಇಒ ಸುರೇಂದ್ರ ನಾಯಕ್, ಹರೀಶ್ಚಂದ್ರ ತೆಂಡುಲ್ಕರ್, ನಿರ್ದೇಶಕರಾದ ಹರೀಶ್ ನಾಯಕ್ ಅಜೆಕಾರು, ಸುನಿಲ್ ನಾಯಕ್, ಸಚ್ಚಿದಾನಂದ ಪ್ರಭು ಕಣಂಜಾರು, ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ದಿನೇಶ್ ನಾಯಕ್ ಹೆರ್ಮುಂಡೆ ಉಪಸ್ಥಿತರಿದ್ದರು.


.
.
.
.
.
.
.
.
.
.
.
.
.
.
.
.
.
.
.
.
