
ಕಾರ್ಕಳ,ಮೇ.22: ರಾಜಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ ಇದರ ರಜತ ಸಂಭ್ರಮ ಕಾರ್ಯಕ್ರಮವು ಮೇ 24 ಮತ್ತು 25 ರಂದು ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಉಷಾ ನಾಯಕ್ ತಿಳಿಸಿದರು.
ಅವರು ಮೇ.22 ರಂದು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿಯು 2001ರಲ್ಲಿ ಸ್ಥಾಪನೆಯಾಗಿದ್ದು, ಇಂದುಮತಿ ಜಿ ಪ್ರಭು ಸ್ಥಾಪಕ ಅಧ್ಯಕ್ಷರಾಗಿ, ಉಷಾ ನಾಯಕ್ ಕಾರ್ಯದರ್ಶಿಯಾಗಿ, ಶುಭಾ ಬಿ ವಾಗ್ಗೆ ಕೋಶಾಧಿಕಾರಿ ಸೇರಿದಂತೆ ಒಟ್ಟು 23 ಮಹಿಳೆಯರ ಕಾರ್ಯಕಾರಿ ಸಮಿತಿಯೊಂದಿಗೆ ಆರಂಭವಾದ ಈ ಸಂಸ್ಥೆಯಲ್ಲಿ ಪ್ರಸ್ತುತ 225 ಸದಸ್ಯರಿದ್ದಾರೆ ಇದೀಗ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮೇ 24-25ರಂದು ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದರು.
ಕಳೆದ 25 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿವೇತನ, ಪ್ರತಿಭಾಪುರಸ್ಕಾರ, ವೈದ್ಯಕೀಯ ಸಹಾಯ, ಆರೋಗ್ಯ ಶಿಬಿರ, ಕ್ರೀಡೆ, ಭಜನೆ, ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತ, ಕುಂಕುಮಾರ್ಚನೆ, ಲಲಿತ ಸಹಸ್ರನಾಮ ಹಾಗೂ ಶ್ರೀ ಶನೈಶ್ಚರ ವ್ರತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ವರ್ಷಂಪ್ರತಿ ಹಮ್ಮಿಕೊಳ್ಳಲಾಗುತ್ತಿದೆ. 2003 ರಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೈವಲ್ಯ ಮಠದ ಉಭಯ ಸ್ವಾಮೀಜಿಗಳ ಚಾತುರ್ಮಾಸದ ಸುಸಂದರ್ಭದಲ್ಲಿ ಅಖಿಲ ಭಾರತ ಮಟ್ಟದ ಪ್ರಥಮ ಆರ್ ಎಸ್ ಬಿ ಮಹಿಳಾ ಸಮ್ಮೇಳನವನ್ನು ಆಯೋಜಿಸಿದ್ದು ಪ್ರಮುಖ ಸಾಧನೆಯಾಗಿದೆ ಎಂದರು.
ದೇವಳದ ಮಾಜಿ ಆಡಳಿತ ಮೊಕೇಸರರಾಗಿದ್ದ ಬಾಬಣ್ಣ ವಾಗ್ಲೆಯವರು ರಾಜಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿಗೆ ಕಾರ್ಕಳದ ಜೋಡುರಸ್ತೆಯಲ್ಲಿ ದಾನವಾಗಿ ನೀಡಿದ ಐದು ಸೆಂಟ್ಸ್ ಸ್ಥಳದಲ್ಲಿ ಊರ ಪರವೂರ ದಾನಿಗಳ ನೆರವಿನಿಂದ ಶ್ರೀ ದುರ್ಗಾ ಲಕ್ಷ್ಮಿ ಎಂಬ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಇದು 2009ರಲ್ಲಿ ಪರಮ ಪೂಜ್ಯ ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿದೆ.
2001ರಲ್ಲಿ ಯೋಗೀಶ್ ಕಿಣಿಯವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಲಕ್ಷ್ಮಿಪುರ ಕಾರ್ಕಳ ಇದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು, ಇದೀಗ 25 ವರ್ಷಗಳನ್ನು ಪೂರೈಸುತ್ತಿದೆ. 2008ರಲ್ಲಿ ದೇವಸ್ಥಾನದಲ್ಲಿ ಜರಗಿದ ರುಕ್ ಸಂಹಿತ ಯಾಗದ ಸುಸಂದರ್ಭದಲ್ಲಿ ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡ ಶ್ರೀ ಮಹಾಲಕ್ಷ್ಮಿ ಮಹಿಳಾ ಯಕ್ಷಗಾನ ಮಂಡಳಿ ಲಕ್ಷ್ಮಿಪುರ ಬಡಗುತಿಟ್ಟು ತಂಡವು ಸಮಾಜದ ಪ್ರಪ್ರಥಮ ಮಹಿಳಾ ಯಕ್ಷಗಾನ ಮಂಡಳಿಯಾಗಿದೆ. ಈ ತಂಡವು ಕಾರ್ಕಳ, ಉಡುಪಿ, ಮಂಗಳೂರು, ಬೆಂಗಳೂರು, ಕೇರಳ, ಮುಂಬೈ ಮುಂತಾದೆಡೆ ಬಡಗುತಿಟ್ಟಿನ ಯಕ್ಷಗಾನ ಹಾಗೂ ತಾಳಮದ್ದಳೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಯಶಸ್ವಿ 17 ವರ್ಷಗಳನ್ನು ಪೂರೈಸಿದೆ.
ರಜತ ಸಂಭ್ರಮದ ಈ ಕಾರ್ಯಕ್ರಮಕ್ಕೆ ಕಾಸರಗೋಡಿನ ಶೇಣಿ ಶಾರದಾಂಬ ವಿದ್ಯಾಸಂಸ್ಥೆಗಳ ಸಂಚಾಲಕಿ ಶಾರದಾ ವೈ ಶೇಣಿ ಹಾಗೂ ಐಸಿಎಐ ಮಂಗಳೂರು ಘಟಕದ ಉಪಾಧ್ಯಕ್ಷರಾದ ಸಿಎ ಮಮತಾ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕೇಸರರಾದ ಚೇತನ್ ನಾಯಕ್ ಮತ್ತು ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯಕ್ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಪ್ರಮುಖ ಸಂಸ್ಥೆಗಳ ಪದಾಧಿಕಾರಿಗಳಾದ ಮಣಿಪಾಲದ ಮೋಹಿನಿ ನಾಯಕ್, ಮುಂಬೈನ ಜ್ಯೋತಿ ಪಾಟ್ಕರ್, ಮುಂಬೈನ ವರ್ಷ ನಾಯಕ್, ಮುಂಬೈನ ಸುಮಿತ್ರ ನಾಯಕ್, ಮಣಿಪಾಲದ ಸುಧಾ ನಾಯಕ್, ಬೆಂಗಳೂರಿನ ಸುಮಾ ಪ್ರಭು, ಬೆಂಗಳೂರಿನ ರೂಪ ನಾಯಕ್, ಮಣಿಪಾಲದ ವನಿತಾ ನಾಯಕ್, ಬಂಟಕಲ್ಲಿನ ಇಂದಿರಾ ಕಾಮತ್, ಬೆಳಗಾಂನ ಸುಮ ನಾಯಕ್, ತೀರ್ಥಹಳ್ಳಿಯ ಗಿರಿಜಾ ಕಾಮತ್, ಮೊಗೇರಿನ ಮೋಹಿನಿ ನಾಯಕ್ ಮತ್ತು ಮೋಂತಿಮಾರಿನ ಗೀತಾ ವಾಗ್ಗೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಸ್ಥಾಪಕ ಅಧ್ಯಕ್ಷ ಇಂದುಮತಿ ಪ್ರಭು ಮತ್ತು ಸ್ಥಾಪಕ ಕೋಶಾಧಿಕಾರಿ ಶುಭಾ ವಾಗ್ಲೆ ಅವರನ್ನು ಗೌರವಿಸಲಾಗುವುದು. ಅತಿಥಿಗಳಾಗಿ ಕಾರ್ಕಳ ರಾಜರಾಜೇಶ್ವರಿ ಸಿಲ್ಕ್ಸ್ನ ಮಾನಸ ವಾಗ್ಲೆ, ಯಕ್ಷಗಾನ ದ ಕಾವ್ಯಶ್ರೀ ನಾಯಕ್ ಆಜೇರು, ಖ್ಯಾತ ಯಕ್ಷಗಾನ ಭಾಗವತರಾದ ರಾಜೀವಿ ನಾಯಕ್ ಪೆರ್ಣಂಕಿಲ ಹಾಗೂ ರಿಕ್ಷಾ ಚಾಲಕಿ ಮತ್ತು ಸಮಾಜ ಸೇವಕಿಯಾದ ಮಹಿಳಾ ಸಾಧಕರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ 12.15 ರಿಂದ 1.15ರವರೆಗೆ ನಡೆಯುವ ವಿಶೇಷ ಗೋಷ್ಠಿಯಲ್ಲಿ ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ ವಿದ್ಯಾಲತಾ ಮತ್ತು ಬೆಂಗಳೂರಿನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಶ್ರುತಿ ನಾಯಕ್ ಅವರು ಭಾಗವಹಿಸಲಿದ್ದಾರೆ. ಬಂಟಕಲ್ಲಿನ ಶ್ರೀ ದುರ್ಗಾ ಚಂಡೆ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಎಂದರು. ಮೇ 25ರಂದು ಬೆಳಗ್ಗೆ 6.30ರಿಂದ ರಾತ್ರಿ 8.30ರ ವರೆಗೆ ವಿವಿಧ ಮಂಡಳಿಗಳಿAದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರೇವತಿ ತೆಂಡುಲ್ಕರ್, ಖಜಾಂಚಿ ಶೋಭ ಪ್ರಭು ಹಾಗೂ ಸದಸ್ಯರಾದ ಭಾರತಿ ಮತ್ತು ಸುಮಾ ನಾಯಕ್ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
